Delhi: ಭಾರತದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಸುಧಾರಣೆ ತರಲು ಸರ್ಕಾರ ಮುಂದಾಗಿದೆ. ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ವಿದ್ಯುತ್ ವ್ಯವಸ್ಥೆಯ ಸುಧಾರಣೆ ಮತ್ತು ವಿಕೇಂದ್ರೀಕರಣ ಗುರಿಯಾಗಿದ್ದು, ಈ ಸಂಬಂಧ ಕಾರ್ಯಪಡೆಯೊಂದನ್ನು ರಚಿಸುವ ಚಿಂತನೆ ನಡೆಯುತ್ತಿದೆ. ಈ ಕಾರ್ಯಪಡೆಯ ಮುಖ್ಯಸ್ಥರಾಗಿ ಇನ್ಫೋಸಿಸ್ ಸಹ-ಸ್ಥಾಪಕರಾದ ನಂದನ್ ನಿಲೇಕಣಿಯವರನ್ನು (Nandan Nilekani) ನೇಮಕ ಮಾಡುವ ಸಾಧ್ಯತೆ ಇದೆ.
ಆಧಾರ್ ಯೋಜನೆ ಯಶಸ್ವಿಯಾಗಿ ಜಾರಿಗೆ ತರಿದ ನಿಲೇಕಣಿಗೆ ಈ ಬಾರಿ ವಿದ್ಯುತ್ ಕ್ಷೇತ್ರದಲ್ಲಿ ಹಣದ ವೆಚ್ಚವನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರ ಮೇಲ್ವಿಚಾರಣೆಯ ಜವಾಬ್ದಾರಿ ಬರಬಹುದು. ಸರ್ಕಾರದ ಗುರಿಯೇ ಶೇಕಡಾ 26ರಷ್ಟು ಖರ್ಚು ಕಡಿಮೆ ಮಾಡುವುದು.
ಈ ಬಗ್ಗೆ ಎಕನಾಮಿಕ್ ಟೈಮ್ಸ್ ವರದಿ ಮಾಡಿದ್ದು, ನಂದನ್ ನಿಲೇಕಣಿಯವರು ವಿದ್ಯುತ್ ಕ್ಷೇತ್ರದಲ್ಲಿ ಡಿಜಿಟಲ್ ಎನರ್ಜಿ ಗ್ರಿಡ್ ಬಗ್ಗೆ ಈಗಾಗಲೇ ತಮ್ಮ ಎಕ್ಸ್ ಅಕೌಂಟ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. “ಎನರ್ಜಿ ಮುಂದಿನ ಯುಪಿಐ ಆಗಲಿದೆ” ಎಂಬುದಾಗಿ ಅವರು ಹೇಳಿದರು.
ಫೆಬ್ರವರಿಯಲ್ಲಿ ಡಿಜಿಟಲ್ ಎನರ್ಜಿ ಗ್ರಿಡ್ ಬಗ್ಗೆ ಶ್ವೇತಪತ್ರವೊಂದು ಬಿಡುಗಡೆ ಮಾಡಲಾಗಿತ್ತು. ನಿಲೇಕಣಿಯವರು ಆ ವರದಿಗೆ ಮುನ್ನುಡಿ ಬರೆದಿದ್ದು, ಅಂತರರಾಷ್ಟ್ರೀಯ ಎನರ್ಜಿ ಏಜೆನ್ಸಿ ಮತ್ತು ಎಫ್ಐಡಿಇ (FIDE) ಜೊತೆಗೂಡಿ ಈ ವರದಿ ಪ್ರಕಟವಾಗಿತ್ತು.
ಈ ಶ್ವೇತಪತ್ರದ ಪ್ರಕಾರ, ಸೌರ ಪ್ಯಾನಲ್ ಅಥವಾ ಇವಿ ಬ್ಯಾಟರಿ ಹೊಂದಿರುವ ಮನೆಗಳು ವಿದ್ಯುತ್ ಅನ್ನು ಬಳಸುವುದರ ಜೊತೆಗೆ ಅದನ್ನು ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟ ಕೂಡ ಮಾಡಬಹುದಾಗಿದೆ. ಈ ಹೊಸ ವ್ಯವಸ್ಥೆಗೆ “ಎನರ್ಜಿ ಈಸ್ ನೆಕ್ಸ್ಟ್ ಯುಪಿಐ” (Energy is the next UPI) ಎಂಬ ನಿಲೇಕಣಿಯವರ ಮಾತು ಗಮನ ಸೆಳೆಯುತ್ತಿದೆ.