Home Environment ಅಕ್ಟೋಬರ್ 15ರವರೆಗೆ ರಾಜ್ಯದಾದ್ಯಂತ ಮಳೆ ಅಬ್ಬರ ಮುಂದುವರಿಯಲಿದೆ

ಅಕ್ಟೋಬರ್ 15ರವರೆಗೆ ರಾಜ್ಯದಾದ್ಯಂತ ಮಳೆ ಅಬ್ಬರ ಮುಂದುವರಿಯಲಿದೆ

17
Rains to continue across the state till October 15

ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರತೆ ಇನ್ನೂ ಕಡಿಮೆಯಾಗಿಲ್ಲ. ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚುರುಕುಗೊಂಡಿದ್ದು, ಕಳೆದ ಎರಡು ದಿನಗಳಿಂದ ಹಲವೆಡೆ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಗುರುವಾರ ಗುಡುಗು ಸಹಿತ ಮಳೆ ಸುರಿಯಿತು. ಹವಾಮಾನ ಇಲಾಖೆಯ ಪ್ರಕಾರ, ಅಕ್ಟೋಬರ್ 15ರವರೆಗೆ ಮಳೆ ಮುಂದುವರಿಯುವ ಸಾಧ್ಯತೆ ಇದೆ.

14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಬೆಂಗಳೂರು ನಗರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೋಲಾರ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಇತರೆ ಜಿಲ್ಲೆಗಳಲ್ಲಿ ಸಾಧಾರಣ ಮಳೆ: ಉಡುಪಿ, ಉತ್ತರ ಕನ್ನಡ, ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಗದಗ, ಹಾವೇರಿ, ಧಾರವಾಡ, ಕೊಪ್ಪಳ, ವಿಜಯಪುರ, ರಾಯಚೂರು, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

  • ಹೆಚ್ಚು ಮಳೆ ಪಡೆದ ಪ್ರದೇಶಗಳು (ಕಳೆದ 24 ಗಂಟೆಗಳಲ್ಲಿ)
  • ಹರಪನಹಳ್ಳಿ – 146 ಮಿ.ಮೀ
  • ಬೇಲೂರು – 122 ಮಿ.ಮೀ
  • ದಾವಣಗೆರೆ – 114.5 ಮಿ.ಮೀ
  • ಚಿಕ್ಕಮಗಳೂರು – 108 ಮಿ.ಮೀ
  • ಮೂಡಿಗೆರೆ – 78.5 ಮಿ.ಮೀ
  • ಕೂಡ್ಲಿಗಿ – 82 ಮಿ.ಮೀ
  • ಕುಣಿಗಲ್ – 78.5 ಮಿ.ಮೀ
  • ಚಿಕ್ಕನಾಯಕನಹಳ್ಳಿ – 76.5 ಮಿ.ಮೀ

ಧಾರವಾಡ ಮತ್ತು ದಾವಣಗೆರೆಯಲ್ಲಿ ಭಾರೀ ಮಳೆ. ಬುಧವಾರ ಮಧ್ಯರಾತ್ರಿ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿದೆ. ಹರಿಹರ ತಾಲೂಕಿನ ಸಂಕ್ಲಿಪುರ–ಗುಳ್ಳದಹಳ್ಳಿ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಎರಡು ಗ್ರಾಮದ ಜನರಿಗೆ ತೊಂದರೆ ಉಂಟಾಗಿದೆ. ಅಡಿಕೆ ತೋಟಗಳು ಹಾಗೂ ಭತ್ತದ ಬೆಳೆಗಳಿಗೆ ಹಾನಿಯಾಗಿದೆ.

ಧಾರವಾಡದ ಅಣ್ಣಿಗೇರಿಯಲ್ಲಿ ಮನೆಗಳಿಗೆ ನೀರು ನುಗ್ಗಿತು. ಅಣ್ಣಿಗೇರಿ ಪಟ್ಟಣದಲ್ಲಿ 50ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಸುರಕೋಡ ಕಾಲೋನಿ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು, ಶಾಸಕ ಎನ್.ಹೆಚ್. ಕೋನರಡ್ಡಿ ಸ್ಥಳಕ್ಕೆ ಭೇಟಿ ನೀಡಿದರು. ಜಿಲ್ಲಾ ಪಂಚಾಯತ್ ಸಿಇಒ ಭುವನೇಶ ಪಾಟೀಲ್ ಸಹ ಸ್ಥಳ ಪರಿಶೀಲನೆ ಮಾಡಿ ಪರಿಹಾರ ಕ್ರಮ ಕೈಗೊಂಡಿದ್ದಾರೆ.

  • ಅಧಿಕಾರಿಗಳ ಸೂಚನೆಗಳು
  • ನಿಂತ ನೀರು ತೆರವುಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು.
  • ರಾಜಕಾಲುವೆ ಹಾಗೂ ಚರಂಡಿ ಅಡ್ಡಿ ತೆರವುಗೊಳಿಸಬೇಕು.
  • ನೀರು ಸರಾಗವಾಗಿ ಹರಿಯುವಂತೆ ಯೋಜನೆ ರೂಪಿಸಬೇಕು.
  • ಹಾನಿಗೊಳಗಾದ ಮನೆಗಳಿಗೆ ನೆರವು ಒದಗಿಸಬೇಕು.

ಸ್ಥಳೀಯರು ಅಧಿಕಾರಿಗಳಿಗೆ ರಾಜಕಾಲುವೆ ಅಗಲೀಕರಣ ಮಾಡಿ ಶಾಶ್ವತ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ. ಒಳಚರಂಡಿ ಕಿರಿದಾಗಿದ್ದು, ಹೂಳು ತುಂಬಿ ನೀರು ಹೊರಬರುತ್ತಿದೆ ಎಂದು ಜನರು ತಿಳಿಸಿದ್ದಾರೆ.

ಮಳೆಯಿಂದ ಧಾರವಾಡದಲ್ಲಿ 7 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಸರ್ಕಾರದ ನಿಯಮಾನುಸಾರ ಪರಿಹಾರ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಸಿಡಿಲು ಬಡಿದ ಪರಿಣಾಮ ಮಲ್ಲಪ್ಪ ಬೆಳ್ಳಿಕೊಪ್ಪ ಅವರ 8 ಕುರಿಗಳು ಮೃತಪಟ್ಟಿವೆ. ಅಧಿಕಾರಿಗಳು ವರದಿ ಸಲ್ಲಿಸಿದ ನಂತರ ಪರಿಹಾರ ಹಣ ನೀಡಲಾಗುತ್ತದೆ.

ಅಣ್ಣಿಗೇರಿ ತಾಲೂಕಿನ ಸೈದಾಪುರ–ಹೊಸಳ್ಳಿ ಸಂಪರ್ಕಿಸುವ ಕಿರು ಸೇತುವೆ ಮಳೆಗೆ ಕೊಚ್ಚಿ ಹೋಗಿದೆ. ಹೊಸ ಸೇತುವೆ ನಿರ್ಮಾಣಕ್ಕೆ ತಕ್ಷಣ ಕ್ರಿಯಾಯೋಜನೆ ರೂಪಿಸಲು ಇಂಜಿನಿಯರ್‌ಗಳಿಗೆ ಸೂಚಿಸಲಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page