Bengaluru: ಚಿನ್ನಸ್ವಾಮಿ ಸ್ಟೇಡಿಯಂ ಬಳಿಯ ಕಾಲ್ತುಳಿತ ದುರಂತದ ಹಿನ್ನೆಲೆ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರನ್ನು ಸರ್ಕಾರ ಅಮಾನತು ಮಾಡಿದ ನಂತರ, ಹೊಸ ಪೊಲೀಸ್ ಆಯುಕ್ತರಾಗಿ (Bengaluru Police Commissioner) ಸೀಮಂತ್ ಕುಮಾರ್ ಸಿಂಗ್ (Seemant Kumar Singh) ನೇಮಕಗೊಂಡಿದ್ದಾರೆ. ಅವರು ಗುರುವಾರ ಮಧ್ಯರಾತ್ರಿ ಕಚೇರಿಗೆ ಬಂದು ತಮ್ಮ ಹೊಸ ಹುದ್ದೆಗೆ ಅಧಿಕೃತವಾಗಿ ಪದಗ್ರಹಣ ಮಾಡಿದರು.
ಈ ಸಂದರ್ಭ, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಟ್ರಾಫಿಕ್ ಆಯುಕ್ತ ಎಂ.ಎನ್. ಅನುಚೇತ್ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಸೀಮಂತ್ ಕುಮಾರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಸ್ಪೆಂಡ್ ಆಗಿರುವ ದಯಾನಂದ್ ಬ್ಯಾಟನ್ ಹಸ್ತಾಂತರ ಮಾಡದೆ ಇದ್ದರೂ, ಸಿಂಗ್ ಅವರು ಕಚೇರಿಯಲ್ಲಿ ಪ್ರಕ್ರಿಯೆಗಳನ್ನು ಪೂರೈಸಿ 39ನೇ ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಆದೇಶದ ಮೇರೆಗೆ ಈ ತುರ್ತು ಸಮಯದಲ್ಲಿ ನಾನು ಅಧಿಕಾರ ಸ್ವೀಕರಿಸಿದ್ದೇನೆ. ಹಿಂದಿನ ಆಯುಕ್ತ ಉತ್ತಮ ಕೆಲಸ ಮಾಡಿದ್ದಾರೆ, ಅದನ್ನು ಮುಂದುವರೆಸುತ್ತೇನೆ. ನಾನು ಈ ಕಚೇರಿಯಲ್ಲಿ ಈಗಾಗಲೇ ಕೆಲಸ ಮಾಡಿದ್ದೆ ಎಂಬ ಅನುಭವವೂ ಇದೆ” ಎಂದು ಹೇಳಿದರು.
ಕಾಲ್ತುಳಿತ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಲು ಇಚ್ಛಿಸದ ಅವರು, “ಇದು ಸೂಕ್ಷ್ಮ ಸಮಯ. ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾತ್ರ ಹೇಳಲು ಸಾಧ್ಯ” ಎಂದರು.
ಕಾಲ್ತುಳಿತದ ಭದ್ರತಾ ವೈಫಲ್ಯದ ಹಿನ್ನೆಲೆಯಲ್ಲಿ, ನಗರ ಪೊಲೀಸ್ ಆಯುಕ್ತ ದಯಾನಂದ್ ಅವರೊಂದಿಗೆ, ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಟೆಕ್ಕಣ್ಣನವರ್, ಕಬ್ಬನ್ ಪಾರ್ಕ್ ಎಸಿಪಿ ಬಾಲಕೃಷ್ಣ ಮತ್ತು ಇನ್ಸ್ಪೆಕ್ಟರ್ ಗಿರೀಶ್ ಅವರನ್ನು ಸಹ ಸರ್ಕಾರ ಅಮಾನತು ಮಾಡಿದೆ.