
Sidlaghatta : ಸಮಾಜದಲ್ಲಿ ಕ್ರಾಂತಿಯುಂಟು ಮಾಡಲು ಸಾಧ್ಯವಿದ್ದಲ್ಲಿ ಅದು ಶಿಕ್ಷಣದಿಂದ ಮಾತ್ರ ಎಂದು ವಿಜ್ಞಾನ ಲೇಖಕ, ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿ ಡಾ. ನಾ ಸೋಮೇಶ್ವರ ತಿಳಿಸಿದರು.
ನಗರದ ಡಾಲ್ಫಿನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಉನ್ನತಿ 2025 ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ಕಾಲೇಜುಗಳಲ್ಲಿ ಕಲಾ ವಿಭಾಗಗಳಿಗೆ ದಾಖಲಾತಿಯೇ ಶೂನ್ಯವಾಗುತ್ತಿದೆ. ಇದನ್ನು ಹೆಚ್ಚಳ ಮಾಡಬೇಕೆಂದಲ್ಲಿ ಪದವಿಯ ಜೊತೆ ಜೊತೆಗೆ ಐಎಎಸ್, ಕೆಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮೊದಲ ವರ್ಷದಿಂದಲೇ ತರಬೇತಿ ಕೊಡುವ ಕೆಲಸವನ್ನು ಮಾಡಬೇಕಿದೆ. ಇಂದಿನ ಯುವಜನತೆ ರಾಷ್ಟ್ರ ಸೇವೆಗೆ ಮುಂದಾಗಬೇಕು. ಪದವಿ ಪೂರ್ವ ಹಂತದಿಂದಲೇ ಎನ್.ಸಿ.ಸಿ ಸೇರಿ ತರಬೇತಿ ಪಡೆದು ಸಿ ಪ್ರಮಾಣ ಪತ್ರವನ್ನು ಹೊಂದಿದ್ದಲ್ಲಿ ಸೈನ್ಯ ಸೇರಲು ಸುಲಭವಾಗುತ್ತದೆ. ಈ ಮೂಲಕ ಪದವಿ ಮುಗಿದ ಕೂಡಲೇ ನೌಕಾ ಪಡೆ, ವಾಯು ಪಡೆ ಅಥವಾ ಸೈನ್ಯಕ್ಕೆ ಸೇರುವ ಮೂಲಕ ರಾಷ್ಟ್ರ ಸೇವೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಡಾಲ್ಫಿನ್ಸ್ ಸಂಸ್ಥೆ ಎನ್.ಸಿ.ಸಿ ಘಟಕವನ್ನು ಹೊಂದುವುದಷ್ಟೇ ಅಲ್ಲದೇ ನೀಟ್, ಸಿಇಟಿ ಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಗ್ರಾಮೀಣ ಭಾಗದಲ್ಲಿ ತರಬೇತಿ ನೀಡುತ್ತಿರುವುದು ಪ್ರಶಂಸನೀಯವಾದುದು ಎಂದರು.
ಯುವಜನತೆ ಉತ್ತಮ ಆದಾಯವನ್ನು ಗಳಿಸುತ್ತಿದ್ದಂತೆ ವಿದೇಶಕ್ಕೆ ಹಾರುವ ಬದಲು ಸ್ವದೇಶದಲ್ಲೇ ಸೇವೆ ಸಲ್ಲಿಸುವುದು ಉತ್ತಮ. ಹೆತ್ತವರ ಜತೆಯಲ್ಲಿದ್ದು ಮಾತೃ ಸೇವೆ ಮತ್ತು ಮಾತೃದೇಶ ಸೇವೆ ಮಾಡುವುದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಒಂಬತ್ತನೇ ರ್ಯಾಂಕ್, ಜಿಲ್ಲೆಗೆ ಎರಡನೇ ರ್ಯಾಂಕ್ ಮತ್ತು ತಾಲ್ಲೂಕಿಗೆ ಮೊದಲನೇ ರ್ಯಾಂಕ್ ಪಡೆದ ಡಾಲ್ಫಿನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ತನಾಜ್ ಮಾಹಿ ಮತ್ತು ವಿಜ್ಞಾನ ವಿಭಾಗದಲ್ಲಿ ತಾಲ್ಲೂಕಿಗೆ ಎರಡನೇ ರ್ಯಾಂಕ್ ಪಡೆದ ಕಿರಣ್ ಬಾಲ ಎಂಬ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಡಾಲ್ಫಿನ್ಸ್ ಸಂಸ್ಥೆಯ ಅಧ್ಯಕ್ಷ ಎ.ನಾಗರಾಜ, ಕಾರ್ಯದರ್ಶಿ ವಿ. ಕೃಷ್ಣಪ್ಪ ಉದ್ಘಾಟಿಸಿ, ವ್ಯವಸ್ಥಾಪಕ ನಿರ್ದೇಶಕ ಅಶೋಕ್, ಆಡಳಿತಾಧಿಕಾರಿ ಚಂದನಾ ಅಶೋಕ್, ಪ್ರಾಂಶುಪಾಲ ಪ್ರೊ. ಶ್ರೀನಿವಾಸ ಮೂರ್ತಿ. ಎನ್, ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಜೆ. ಎ. ಸುದರ್ಶನ್, ಶಾಲೆಯ ಪ್ರಾಂಶುಪಾಲ ಆರಿಫ್ ಅಹಮದ್, ಸಿಬಿಎಸ್ಸಿ ವಿಭಾಗದ ಪ್ರಾಂಶುಪಾಲ ಎಲ್. ಮುನಿಕೃಷ್ಣಪ್ಪ, ಎಂ. ಎಚ್ ನಾಗೇಶ್, ಗಜೇಂದ್ರ, ಜಾನಕಿ ರಾಮ್, ನಾಗೇಶಯ್ಯ, ಸಂತೋಷ್ ಕುಮಾರ್, ಮಂಜುನಾಥ್, ವಿನಯ್, ಪ್ರವೀಣ್, ಸಂಪತ್ ಕುಮಾರ್, ಡಾ. ನಾಗೇಶ್, ಗಜೇಂದ್ರ. ಎ, ಖದೀರ್ ಅಹಮದ್, ಶಿಲ್ಪ, ಸುನೀತ ಹಾಜರಿದ್ದರು.