
Sidlaghatta : ಶಾಲಾ ಕಾಲೇಜು ದಿನಗಳು ವಿದ್ಯಾರ್ಥಿಗಳ ಬದುಕಿನಲ್ಲಿ ಬಂಗಾರದ ದಿನಗಳು ಇದ್ದಂತೆ. ತಮ್ಮ ಬದುಕಿನ ಗುರಿಯನ್ನು ಮುಟ್ಟಲು ಈ ದಿನಗಳು ಮೆಟ್ಟಿಲುಗಳು. ಇಲ್ಲಿ ಶ್ರಮಪಟ್ಟರೆ ಬದುಕಿನ ಉಳಿದ ಜೀವನ ನೆಮ್ಮದಿ ಸುಖ ಸಂತೋಷದ ಜೀವನ ನಿಮ್ಮದಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಮುರಳಿ ಆನಂದ್ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾಲೇಜು ವಾರ್ಷಿಕೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಎಸ್.ಎಸ್ ರೇಂಜರ್ಸ ಮತ್ತು ರೋವರ್ಸ್ ರೆಡ್ ಕ್ರಾಸ್ ಪರಂಪರೆ ಕೂಟ ಮಹಿಳಾ ಸಮಿತಿ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹದಿ ಹರೆಯದ ಈ ದಿನಗಳಲ್ಲಿ ಮನಸು ಎಲ್ಲವನ್ನೂ ಬಯಸುತ್ತದೆ. ಕಣ್ಣಿಗೆ ನೋಡಿದ್ದೆಲ್ಲವೂ ಬೇಕೆನ್ನುವ ಬಯಕೆಗಳು ಸಹಜ. ಆದರೆ ಅದಕ್ಕೆ ಲಗಾಮು ಹಾಕುವ ಶಕ್ತಿಯನ್ನು ಈ ಹಂತದಲ್ಲಿ ಬೆಳೆಸಿಕೊಂಡವರಷ್ಟೆ ಬದುಕಿನ ಗುರಿ ಮುಟ್ಟಬಲ್ಲರು. ಇಲ್ಲವಾದಲ್ಲಿ ಹಾದಿ ತಪ್ಪಲಿದ್ದಾರೆ ಎಂದು ಹೇಳಿದರು.
ಮನೆಗಳಲ್ಲಿ ಹೆತ್ತವರು, ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು, ಉಪನ್ಯಾಸಕರು, ಸಮಾಜದಲ್ಲಿ ಸ್ನೇಹಿತರು, ನೆರೆ ಹೊರೆಯ ಎಲ್ಲರ ಪರಿಣಾಮವೂ ಈ ಹಂತದಲ್ಲಿ ವಿದ್ಯಾರ್ಥಿಗಳ ಬದುಕಿನ ಮೇಲೆ ಬೀರಬಲ್ಲದು. ಹಾಗಾಗಿ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸುವವರಷ್ಟೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಮಾದರಿಯಾಗಿ ಬೆಳೆಯಬಲ್ಲರು ಎಂದು ಹೇಳಿದರು.
ಮಾರ್ಗದರ್ಶನ ಕೊರತೆ, ನೋಡಿದ್ದು ಕಂಡಿದ್ದು ಎಲ್ಲವನ್ನೂ ಅನುಭವಿಸುವ ತವಕದಿಂದ ಅನೇಕ ಯುವಕರು ದಾರಿ ತಪ್ಪಿದ್ದಾರೆ. ಕ್ಷಣಿಕ ಸುಖಕ್ಕಾಗಿ ಚಿನ್ನದಂತ ಬದುಕನ್ನೆ ನರಕವನ್ನಾಗಿ ಮಾಡಿಕೊಂಡ ಎಷ್ಟೋ ಮಂದಿ ನಮ್ಮ ನಿಮ್ಮ ನಡುವೆ ಇದ್ದಾರೆ ಎಂದರು.
ಈ ಸಮಾಜ, ಸರ್ಕಾರ ಯುವಪೀಳಿಗೆ ಮೇಲೆ ಸಾಕಷ್ಟು ಭರವಸೆಗಳನ್ನು ಇಟ್ಟುಕೊಂಡಿದೆ. ಈ ನಾಡು ದೇಶದ ಅಭಿವೃದ್ದಿ ಯುವಕರ ಮೇಲೆ ಅವಲಂಭಿಸಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಎಲ್ಲರೂ ಕೂಡ ತಮ್ಮ ಬದುಕನ್ನು ಉತ್ತಮಪಡಿಸಿಕೊಂಡು ಸಮಾಜವನ್ನೂ ಉತ್ತಮಪಡಿಸುವಂತಾಗಬೇಕೆಂದು ಮನವಿ ಮಾಡಿದರು.
ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ನಾಗರಾಜ್ ಮಾತನಾಡಿ, ಸಮಾಜದಲ್ಲಿ ಮುಖ್ಯ ವ್ಯಕ್ತಿಗಳಾಗಿ ಬಾಳುವುದನ್ನು ಕಲಿಯಬೇಕು. ವಿದ್ಯಾವಂತರಾಗಿ ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ ಪಡೆದು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಆ ಮೂಲಕ ಸಮಾಜ ನಮ್ಮನ್ನು ಗುರುತಿಸುವಂತಾಗಬೇಕು ಎಂದರು.
ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಹೆಚ್ಚು ಅಂಕಗಳಿಸಿದ ಪ್ರತಿಭಾವಂತರು ಹಾಗೂ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಉಪನ್ಯಾಸಕರಾದ ಡಾ.ರವಿಕುಮಾರ್, ಡಾ.ಜಿ.ಎಲ್.ವಿಜೇಯಂದ್ರಕುಮಾರ್, ಡಾ.ಸುನೀತಾ, ಡಾ.ಷಫಿ ಅಹಮದ್, ಸುಗುಣ, ಆದಿನಾರಾಯಣಪ್ಪ, ಪ್ರೋ.ವೆಂಕಟೇಶ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ವಿಸ್ಡಂ ನಾಗರಾಜು, ಪ್ಯಾರಾಜಾನ್ ಹಾಜರಿದ್ದರು.