
Sidlaghatta : ಜೂನ್ 27 ರಂದು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸಡಗರ ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಹಂಡಿಗನಾಳದ ಶ್ರೀವೀರಣ್ಣಸ್ವಾಮಿ ಶ್ರೀಕೆಂಪಣ್ಣಸ್ವಾಮಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಕೆಂಪೇಗೌಡರ ಆಚರಣಾ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪೂರ್ವಭಾವಿ ಸಭೆಯಲ್ಲಿ ಸೇರಿದ್ದ ಆಚರಣಾ ಸಮಿತಿಯ ಸದಸ್ಯರು ಹಾಗೂ ಒಕ್ಕಲಿಗ ಸಮುದಾಯದ ಮುಖಂಡರು ಜಯಂತಿಯನ್ನು ಅರ್ಥಪೂರ್ಣವಾಗಿ ಯಶಸ್ವಿಯಾಗಿ ಆಚರಿಸುವ ಬಗ್ಗೆ ನಡೆಸಬೇಕಾದ ಸಿದ್ದತೆಗಳ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಇದು ನಾಡಪ್ರಭುಗಳ 516ನೇ ಜಯಂತಿಯಾಗಿದ್ದು ಜಯಂತಿಯಂದು ವೇದಿಕೆ ಕಾರ್ಯಕ್ರಮ ಬೇಡ. ಇನ್ನುಳಿದಂತೆ ಪಲ್ಲಕ್ಕಿಗಳ ಉತ್ಸವ, ಪ್ರತಿಭಾ ಪುರಸ್ಕಾರ ಮುಂತಾದ ಎಲ್ಲ ಕಾರ್ಯಕ್ರಮಗಳನ್ನು ಎಂದಿನಂತೆ ನಡೆಸೋಣ ಎಂದು ಹೆಚ್ಚಿನ ಮಂದಿ ಅಭಿಪ್ರಾಯವನ್ನು ಮಂಡಿಸಿದರು. ಆದ್ದರಿಂದ ಈ ಬಾರಿ ವೇದಿಕೆ ಕಾರ್ಯಕ್ರಮವನ್ನು ನಡೆಸದಿರಲು ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಮಿಕ್ಕಂತೆ ತಾಲ್ಲೂಕಿನ ಎಲ್ಲ ಗ್ರಾಮಗಳಿಂದಲೂ ಕೆಂಪೇಗೌಡರ ಹೂವಿನ ಪಲ್ಲಕ್ಕಿಗಳು ಬರಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯವರು ಭಾಗವಹಿಸುವಂತೆ ಅಗತ್ಯ ಸಿದ್ದತೆಗಳನ್ನು ನಡೆಸಲು ತೀರ್ಮಾನಿಸಲಾಯಿತು.
ಉತ್ಸವದ ವೇಳೆ ಯಾವುದೆ ಕಾರಣಕ್ಕೂ ಡಿಜೆಗಳನ್ನು ಬಳಸದಂತೆ, ಒಂದೊಮ್ಮೆ ಬಳಸಿದರೆ ಅದರ ಸಾಧಕ ಬಾಧಕಗಳು ಯಾರು ಡಿಜೆಯನ್ನು ತಂದಿರುತ್ತಾರೋ ಅವರೆ ನಿಭಾಯಿಸಬೇಕಾಗುತ್ತದೆ ಎಂದು ಸಭೆಯಲ್ಲಿ ಎಚ್ಚರಿಸಿದರು.
ಉಳಿದಂತೆ ಉತ್ಸವದ ತಯಾರಿ, ಉತ್ಸವ ಸಾಗಬೇಕಾದ ಮಾರ್ಗ, ಹಣಕಾಸಿನ ಸಂಗ್ರಹ, ಊಟದ ವ್ಯವಸ್ಥೆ ಸೇರಿದಂತೆ ಎಲ್ಲವನ್ನೂ ಆಚರಣಾ ಸಮಿತಿಯ ತೀರ್ಮಾನಕ್ಕೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಉತ್ಸವವನ್ನು ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಅಂದು ಬೆಳಗ್ಗೆ 10.30ಕ್ಕೆ ಆರಂಭವಾಗಲಿದ್ದು ಶ್ರೀಗಳು ಹಾಗೂ ಅತಿಥಿ ಗಣ್ಯರಿಂದ ಉತ್ಸವಕ್ಕೆ ಚಾಲನೆ ಕೊಡಿಸಬೇಕು. ಸಾರಿಗೆ ಬಸ್ ನಿಲ್ದಾಣದಿಂದ ಕೋಟೆ ವೃತ್ತ, ಮಾರಮ್ಮ ದೇವಿ ವೃತ್ತ, ಕಾಂಗ್ರೆಸ್ ಭವನ ರಸ್ತೆ, ಉಲ್ಲೂರು ಪೇಟೆಯಲ್ಲಿ ಸಾಗಿ ಚಿಂತಾಮಣಿ ಮಾರ್ಗದ ಒಕ್ಕಲಿಗರ ಸಂಘದ ಕಚೇರಿವರೆಗೂ ಉತ್ಸವದ ಮೆರವಣಿಗೆ ನಡೆಸಲು ನಿರ್ಣಯಿಸಲಾಯಿತು.
ಉತ್ಸವದಲ್ಲಿ ಭಾಗವಹಿಸುವ ಪಲ್ಲಕ್ಕಿಗಳಿಗೆ ಉಲ್ಲೂರುಪೇಟೆ ಶ್ರೀರಾಮ ಭಜನೆ ಮಂದಿರದ ಬಳಿ ನೆನಪಿನ ಕಾಣಿಕೆ ನೀಡಲು ಮತ್ತು ಒಕ್ಕಲಿಗರ ಸಂಘದ ಕಚೇರಿ ಬಳಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಯಿತು.
ಉತ್ಸವಕ್ಕೂ ಮೊದಲು ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ನಾಡುಪ್ರಭು ಕೆಂಪೇಗೌಡ ಜಯಂತಿ ಆಚರಣೆ ಹಾಗೂ ಸಮುದಾಯದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನಡೆಸಲು ಸಭೆಯಲ್ಲಿ ಎಲ್ಲರೂ ಒಪ್ಪಿಗೆ ನೀಡಿದರು.
ಸಭೆಯಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಒಕ್ಕಲಿಗರ ಯುವಸೇನೆ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಸಮುದಾಯದ ಮುಖಂಡರಾದ ಕೆ.ಎನ್.ಸುಬ್ಬಾರೆಡ್ಡಿ, ಪುರುಷೋತ್ತಮ್, ಸಿ.ಎ.ದೇವರಾಜ್, ಮೇಲೂರು ಬಿ.ಕೆ.ಶ್ರೀನಿವಾಸ್, ಚಂದ್ರೇಗೌಡ, ಹೀರೆಬಲ್ಲ ಕೃಷ್ಣಪ್ಪ, ಶ್ರೀನಿವಾಸ್, ದೊಣ್ಣಹಳ್ಳಿ ರಾಮಣ್ಣ, ವರದನಾಯಕನಹಳ್ಳಿ ಗಜೇಂದ್ರ, ಕೆ.ವಿ.ಮುನೇಗೌಡ, ಸಿ.ಇ.ಕರಗಪ್ಪ, ತಾದೂರು ಮಂಜುನಾಥ್, ಹಿತ್ತಲಹಳ್ಳಿ ರಮೇಶ್, ಪಟೇಲ್ ನಾರಾಯಣಸ್ವಾಮಿ, ಗೊರಮೊಡಗು ರಾಜಣ್ಣ, ಹಿತ್ತಲಹಳ್ಳಿ ಗೋಪಾಲಗೌಡ ಭಾಗವಹಿಸಿದ್ದರು.