
Sidlaghatta : ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಮತ್ತು ಡಾ. ಬಾಬು ಜಗಜೀವನರಾಂ ಅವರ 118ನೇ ಜನ್ಮದಿನವನ್ನು ಮೇ 19 ಸೋಮವಾರ ಆಚರಿಸಲು ಸಜ್ಜಾಗಿದ್ದು, ಈ ಕಾರ್ಯಕ್ರಮವು ಜಾತಿ, ಧರ್ಮ, ಪಕ್ಷದ ಗೌಡಂಬೆಗಳನ್ನು ಮೀರಿ ಎಲ್ಲರ ಸಹಭಾಗಿತ್ವದಲ್ಲಿ ಒಂದಾದ ಶ್ರೇಷ್ಠ ಕಾರ್ಯಕ್ರಮವಾಗಬೇಕೆಂದು ದಲಿತ ಯುವ ಮುಖಂಡ ಕೆ.ಎನ್. ಮುನೀಂದ್ರ ತಿಳಿಸಿದರು.
ಶನಿವಾರ ನಗರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಭಾವಪೂರ್ಣ ಸಮಾರಂಭದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಉದ್ಘಾಟನೆ ನೆರವೇರಿಸಲಿದ್ದು, ಶ್ರೀ ಉರಿಲಿಂಗ ಪೆದ್ದಿ ಮಹಾಸಂಸ್ಥಾನದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಮತ್ತು ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ವಿಶೇಷ ಅತಿಥಿಗಳಾಗಿ ಹಾಜರಾಗಲಿದ್ದಾರೆ” ಎಂದು ಹೇಳಿದರು.
ಸಂಜೆಯ ವೇಳೆ ವೆ.ಚಿ. ಅರುಣ್ ಅವರ ನೇತೃತ್ವದಲ್ಲಿ ರಸಸಂಜೆ ಕಾರ್ಯಕ್ರಮವೂ ನಡೆಯಲಿದ್ದು, ಎಲ್ಲರಿಗೂ ಮನರಂಜನೆ ನೀಡಲಿದೆ.
“ಈ ಸಮಾರಂಭವು ಯಾವುದೇ ರಾಜಕೀಯ ಅಥವಾ ಧಾರ್ಮಿಕ ಹಿನ್ನಲೆಯಲ್ಲಿ ಅಲ್ಲದೇ, ಸಮಾಜದ ಏಕತೆ ಮತ್ತು ಸಾಂಸ್ಕೃತಿಕ ಜಾಗೃತಿಗಾಗಿ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ನಾವು ಪ್ರಾರ್ಥಿಸುತ್ತೇವೆ,” ಎಂದು ಮುನೀಂದ್ರ ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಲಿತ ಯುವ ಮುಖಂಡರಾದ ಅರುಣ್ ಕುಮಾರ್, ಪ್ರಮೋದ್, ಚಂದ್ರಶೇಖರ್ ಮತ್ತು ವೆಂಕಟೇಶ್ ಕೂಡ ಉಪಸ್ಥಿತರಿದ್ದರು.