
Kundalagurki, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಆಚರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ ಮಾತನಾಡಿ, ಮಹಿಳೆಯರು ರಾಷ್ತ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರ, ಎಲ್ಲದರಲ್ಲೂ ತಮ್ಮದೆ ಆದ ಛಾಪನ್ನ ಮೂಡಿಸಿದ್ದಾರೆ. ಮಹಿಳೆಯರು ಸಮಾನತೆಯ ಜೊತೆಗೆ ಒಗ್ಗಟ್ಟಿನಲ್ಲಿ ಸದಾ ಮುಂದಿರುವುದು ದೇಶದ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗಲಿದೆ. ಮಹಿಳೆಯರ ಸಾಧನೆಗೆ ಮನಃಪೂರ್ವಕ ಗೌರವ ಸೂಚಿಸುವ ದಿನ ಇದಾಗಿದ್ದು, ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡಬೇಕು ಎಂದರೆ ತಮ್ಮ ಪರಿಶ್ರಮ ಮುಖ್ಯವಾಗುತ್ತದೆ ಎಂದರು.
ಮಹಿಳಾ ಸಬಲೀಕರಣವನ್ನು ಮಹಿಳೆಯರಿಗೆ ಜ್ಞಾನ, ಕೌಶಲ್ಯ, ಸಂಪನ್ಮೂಲಗಳು ಮತ್ತು ಸಂಸ್ಥೆಗಳೊಂದಿಗೆ ಸಜ್ಜುಗೊಳಿಸುವ ಪ್ರಕ್ರಿಯೆಯಾಗಬೇಕು. ಮಹಿಳಾ ಸಬಲೀಕರಣವು ಲಿಂಗ ಸಮಾನತೆಯನ್ನು ಸಾಧಿಸಲು ನಿರ್ಣಾಯಕವಾಗಿದೆ ಮಾತ್ರವಲ್ಲದೆ, ಇದು ಮಹಿಳೆಯರ ಸಂಪೂರ್ಣ ಸಾಮರ್ಥ್ಯವನ್ನು ಅನಾವರಣಗೊಳಿಸುತ್ತದೆ ಮತ್ತು ಹೆಚ್ಚು ಸಮಗ್ರ ಮತ್ತು ಸಮೃದ್ಧ ಸಮಾಜವನ್ನು ಬೆಳೆಸುವುದರಿಂದ ಪ್ರಗತಿ ಮತ್ತು ಅಭಿವೃದ್ಧಿಗೆ ವೇಗವರ್ಧಕವಾಗಲಿದೆ ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಮಹಿಳೆಯರಿಗೆ ಅರಿಶಿಣ ಕುಂಕುಮ ನೀಡಲಾಯಿತು.
ದಿಬ್ಬೂರಹಳ್ಳಿ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶ್ಯಾಮಲಾ, ಕುಂದಲಗುರ್ಕಿ ಪಂಚಾಯಿತಿ ಪಿ.ಡಿ.ಒ ಆದಿಲಕ್ಷ್ಮೀ, ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷ ಮುನಿರಾಜು, ಗ್ರಾಪಂ ಸದಸ್ಯರು, ಎಫ್.ಇ.ಎಸ್ ಸಂಯೋಜಕಿ ನಿಖತ್ ಪರ್ವಿನ್, ಸರ್ಕಾರಿ ಶಾಲಾ ಶಿಕ್ಷಕರು, ಗ್ರಾ.ಪಂ ಸಿಬ್ಬಂದಿ ಹಾಜರಿದ್ದರು.