
ಮಧ್ಯಪ್ರದೇಶದ ಸಚಿವ ವಿಜಯ್ ಶಾ (Minister Vijay Shah) ಅವರು ಕರ್ನಲ್ ಸೋಫಿಯಾ ಖುರೇಷಿ ಕುರಿತು ನೀಡಿದ ಆಕ್ಷೇಪಾರ್ಹ ಹೇಳಿಕೆಯ ಕುರಿತು ತನಿಖೆ ನಡೆಸಲು, ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಜ್ಯ ಪೊಲೀಸ್ ಇಲಾಖೆ ಮೂರು ಸದಸ್ಯರ ವಿಶೇಷ ತನಿಖಾ ತಂಡ (SIT) ರಚಿಸಿದೆ.
ಈ ತಂಡದಲ್ಲಿ ಐಜಿಪಿ ಪ್ರಮೋದ್ ವರ್ಮಾ, ಡಿಐಜಿಪಿ ಕಲ್ಯಾಣ್ ಚಕ್ರವರ್ತಿ ಮತ್ತು ಮಹಿಳಾ SP ವಾಹಿನಿ ಸಿಂಗ್ ಇದ್ದಾರೆ. ಈ ತಂಡ ಮೇ 28ರೊಳಗೆ ತನಿಖಾ ವರದಿ ಸಲ್ಲಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಈ ಪ್ರಕರಣವು, ಕರ್ನಲ್ ಖುರೇಷಿ ‘ಆಪರೇಷನ್ ಸಿಂಧೂರ’ ಕುರಿತು ಮಾಧ್ಯಮಗಳಿಗೆ ನೀಡಿದ ವಿವರದ ಬಳಿಕ, ಸಚಿವ ವಿಜಯ್ ಶಾ ನೀಡಿದ ವಿವಾದಾಸ್ಪದ ಹೇಳಿಕೆಯಿಂದ ಆರಂಭವಾಯಿತು. ಈ ಹೇಳಿಕೆ ವಿರೋಧವಾಗಿ ರಾಜ್ಯದ ಹಲವೆಡೆ ಟೀಕೆ ವ್ಯಕ್ತವಾಯಿತು. ಹೈಕೋರ್ಟ್ ಆದೇಶದ ನಂತರ, ಪೋಲೀಸರು ಎಫ್ಐಆರ್ ದಾಖಲಿಸಿದರು.
ಸರ್ವೋಚ್ಛ ನ್ಯಾಯಾಲಯ ಈ ಕುರಿತು ಗಂಭೀರವಾಗಿ ಗಮನ ಹರಿಸಿ, ತನಿಖೆಗೆ ಐಜಿ ಮಟ್ಟದ ಅಧಿಕಾರಿಯ ನೇತೃತ್ವದಲ್ಲಿ ಮೂರು ಸದಸ್ಯರ ತಂಡವನ್ನು ರಚಿಸಲು ಮಧ್ಯಪ್ರದೇಶದ ಡಿಜಿಪಿಗೆ ಆದೇಶಿಸಿತು. ಇದರಂತೆ ಡಿಜಿಪಿ ಕೈಲಾಶ್ ಮಕ್ವಾನ್ ಅವರು ಎಸ್ಐಟಿ ರಚನೆಯ ಪರಿಪಾಟಿಯನ್ನು ಪೂರ್ಣಗೊಳಿಸಿದರು.
ಹೇಳಿಕೆಯ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ ಸಚಿವ ವಿಜಯ್ ಶಾ ಕ್ಷಮೆ ಕೇಳಿದ್ದು, “ಕರ್ನಲ್ ಖುರೇಷಿ ನನ್ನ ಸಹೋದರಿಯಂತವರು, ಅವರಿಗೆ ಗೌರವವಿದೆ” ಎಂದು ಹೇಳಿದರು.