
Bengaluru: ದೇವಾಲಯಗಳಲ್ಲಿ ಕಾಲ್ತುಳಿತ, ಬೆಂಕಿ ಅವಘಡಗಳು ಮತ್ತು ತುರ್ತು ವೈದ್ಯಕೀಯ ಪರಿಸ್ಥಿತಿಗಳನ್ನು ತಡೆಯಲು “ದೇವಾಲಯ ಕಾರ್ಯಪಡೆ” (Temple Task Force) ಎಂಬ ಹೊಸ ತಂಡವನ್ನು ರಚಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ನೇತೃತ್ವದ ‘ಕರ್ನಾಟಕ ಆಡಳಿತ ಸುಧಾರಣಾ ಆಯೋಗ – 2’ ಈ ಶಿಫಾರಸ್ಸು ಸಲ್ಲಿಸಿದೆ. ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನ್ನ ಎಂಟನೇ ಶಿಫಾರಸು ವರದಿಯನ್ನು ಗುರುವಾರ ನೀಡಿದೆ.
ಈ ಕಾರ್ಯಪಡೆ ಭಕ್ತರ ನಿಯಂತ್ರಿತ ಪ್ರವೇಶ, ಸರದಿ ಸಾಲುಗಳ ನಿರ್ವಹಣೆ, ಟಿಕೆಟ್ ಕೌಂಟರ್ ಮತ್ತು ಪ್ರಸಾದ ವಿತರಣೆಯಲ್ಲೂ ಸಹಾಯ ಮಾಡಲಿದೆ. ಇದರಿಂದ ಭದ್ರತೆ ಹೆಚ್ಚಾಗಿ ಅವಘಡಗಳನ್ನು ತಡೆಗಟ್ಟಬಹುದು.
ಕಾರ್ಯಪಡೆಯ ಮುಖ್ಯ ಕಾರ್ಯಗಳು
- ದೇವಾಲಯದ ಪ್ರವೇಶ ಮತ್ತು ನಿರ್ಗಮನ ನಿಯಂತ್ರಣ.
- ಬ್ಯಾರಿಕೇಡ್ಗಳು ಮತ್ತು ದಾರಿಯ ಸೂಚನೆಗಳಿಂದ ದಟ್ಟಣೆಯ ನಿಯಂತ್ರಣ.
- ಅಗ್ನಿಶಾಮಕ ಸಿಬ್ಬಂದಿ, ವೈದ್ಯಕೀಯ ಸೇವೆಗಳೊಂದಿಗೆ ಒಟ್ಟಾಗಿ ತುರ್ತು ಯೋಜನೆ ರೂಪಿಸು.
- ಮಹಾ ಕಾರ್ಯಕ್ರಮಗಳ ಸಂದರ್ಭದಲ್ಲಿ ತಾತ್ಕಾಲಿಕ ವೈದ್ಯಕೀಯ ಬೂತ್ಗಳು ಸ್ಥಾಪನೆ ಮತ್ತು ಭದ್ರತಾ ವ್ಯವಸ್ಥೆ ಬಲಪಡಿಸುವುದು.
ಸಂಪರ್ಕ ಮತ್ತು ಮಾಹಿತಿ ವ್ಯವಸ್ಥೆ
- ಭಕ್ತರಿಗೆ ಸರದಿ, ಪ್ರವೇಶ ಮಾರ್ಗ, ಸಮಯ ಬದಲಾವಣೆ ಮುಂತಾದ ಮಾಹಿತಿ ನೀಡಲು ಧ್ವನಿವರ್ಧಕಗಳು ಮತ್ತು ಸೂಚನಾ ಫಲಕಗಳ ಬಳಕೆ.
- ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ನಿಯಮಗಳಲ್ಲಿ ಈ ಕಾರ್ಯಪಡೆಗೆ ಅನುಕೂಲವಾಗುವಂತೆ ಬದಲಾವಣೆ ಶಿಫಾರಸು.
ಈ ಶಿಫಾರಸ್ಸು ದೇವಾಲಯಗಳಲ್ಲಿ ಭದ್ರತೆ ಮತ್ತು ಸೇವೆಯ ದಕ್ಷತೆಯನ್ನು ಹೆಚ್ಚಿಸಲು ಉದ್ದೇಶಿತವಾಗಿದೆ.