Bengaluru: RCB (ರಾಯಲ್ ಚಾಲೆಂಜರ್ಸ್ ಬೆಂಗಳೂರು) ತಂಡದ ವಿಜಯೋತ್ಸವ ಸಮಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಜನಸಂದಣಿಯಿಂದ ಕಾಲ್ತುಳಿತವಾಗಿದ್ದು, 11 ಮಂದಿ ಮೃತರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ (High Court) 9 ಮಹತ್ವದ ಪ್ರಶ್ನೆಗಳನ್ನು ಕೇಳಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ನೇತೃತ್ವದ ವಿಭಾಗೀಯ ಪೀಠವು ಮಾಧ್ಯಮ ವರದಿಗಳ ಆಧಾರದಲ್ಲಿ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ದಾಖಲಿಸಲು ಸೂಚನೆ ನೀಡಿದ್ದು, ಸರ್ಕಾರ ಈ ಪ್ರಶ್ನೆಗಳಿಗೆ ಉತ್ತರಿಸಿ ಜೂನ್ 10ರೊಳಗೆ ವರದಿ ಸಲ್ಲಿಸಬೇಕೆಂದು ಸೂಚಿಸಿದೆ.
ಹೈಕೋರ್ಟ್ ಕೇಳಿದ 9 ಪ್ರಶ್ನೆಗಳು
- ಈ ವಿಜಯೋತ್ಸವವನ್ನು ಯಾವಾಗ, ಯಾರು ಮತ್ತು ಹೇಗೆ ಆಯೋಜಿಸಿದರು?
- ಸಂಚಾರ ನಿಯಂತ್ರಣಕ್ಕೆ ಯಾವ ಕ್ರಮ ತೆಗೆದುಕೊಳ್ಳಲಾಯಿತು?
- ಜನಸಂದಣಿಯನ್ನು ನಿಯಂತ್ರಿಸಲು ಯಾವ ರೀತಿಯ ಸಿದ್ಧತೆ ಮಾಡಲಾಗಿತ್ತು?
- ಸ್ಥಳದಲ್ಲಿ ವೈದ್ಯಕೀಯ ಮತ್ತು ಇತರೆ ಸೌಲಭ್ಯಗಳು ಏನೆಲ್ಲಾ ಇತ್ತು?
- ಈ ಕಾರ್ಯಕ್ರಮಕ್ಕೆ ಎಷ್ಟು ಜನರು ಬರುವ ಸಾಧ್ಯತೆ ಇದೆ ಎಂಬುದರ ಬಗ್ಗೆ ಮುಂಚಿತವಾಗಿ ಅಂದಾಜು ಮಾಡಲಾಗಿತ್ತೇ?
- ಗಾಯಗೊಂಡವರಿಗೆ ಸ್ಥಳದಲ್ಲೇ ತಕ್ಷಣ ವೈದ್ಯಕೀಯ ಸಹಾಯ ಲಭಿಸಿತ್ತೇ? ಇಲ್ಲದಿದ್ದರೆ ಏಕೆ ಲಭಿಸಲಿಲ್ಲ?
- ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಎಷ್ಟು ಸಮಯ ಹಿಡಿಯಿತು?
- ಇಂತಹ ಬೃಹತ್ ಜನಸಂದಣಿಯ ಕಾರ್ಯಕ್ರಮಗಳಿಗೆ ಯಾವುದೇ ನಿಯಮಾವಳಿಗಳ (SOP) ವ್ಯವಸ್ಥೆ ಇದೆಯೇ?
- ಈ ಕಾರ್ಯಕ್ರಮಕ್ಕೆ ಸರಿಯಾಗಿ ಅನುಮತಿ ಕೋರಲಾಗಿತ್ತೇ?