Bengaluru: ಚಿನ್ನಸ್ವಾಮಿ ಮೈದಾನದ ಬಳಿ ನಡೆದ ಕಾಲ್ತುಳಿತ ಪ್ರಕರಣಕ್ಕೆ (Stampede investigation) ಸಂಬಂಧಿಸಿದಂತೆ ಅಮಾನತು ಹೊಂದಿದ್ದ ಮಾಜಿ ಪೊಲೀಸ್ ಕಮಿಷನರ್ ಬಿ. ದಯಾನಂದ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರನ್ನು ಬೆಂಗಳೂರು ಜಿಲ್ಲಾ ಮ್ಯಾಜಿಸ್ಟ್ರೇಟ್ ಜಗದೀಶ್ ಅವರು ಗುರುವಾರ ವಿಚಾರಣೆಗೆ ಒಳಪಡಿಸಿದರು.
ಈ ಇಬ್ಬರು ಅಧಿಕಾರಿಗಳಿಗೆ ಹಲವಾರು ಬಾರಿ ನೋಟಿಸ್ ನೀಡಲಾಗಿತ್ತು. ಗುರುವಾರ ಅಂತಿಮವಾಗಿ ಇಬ್ಬರೂ ಹಾಜರಾಗಿ ಪ್ರತ್ಯೇಕವಾಗಿ ಹೇಳಿಕೆ ನೀಡಿದ್ದಾರೆ. ದಯಾನಂದ ಅವರು ಖಾಸಗಿ ಕಾರಿನಲ್ಲಿ ತಮ್ಮ ವಕೀಲರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಬಂದು ವಿಚಾರಣೆಗೆ ಹಾಜರಾದರು.
ತನಿಖಾ ಅಧಿಕಾರಿಗಳು
- ಕಾಲ್ತುಳಿತಕ್ಕೆ ಕಾರಣವೇನು?
- ಆರ್ಸಿಬಿ ವಿಜಯೋತ್ಸವಕ್ಕೆ ಅನುಮತಿ ನೀಡದಿದ್ದರೂ ಹೇಗೆ ನಡೆಸಲಾಯಿತು?
- ಸ್ಟೇಡಿಯಂ ಬಳಿ ಪೋಲಿಸರ ನಿಯೋಜನೆ ಯಾಕೆ ಕಡಿಮೆ?
- ಇಂತಹ ಹಲವಾರು ಪ್ರಶ್ನೆಗಳಿಗೆ ದಯಾನಂದ ಅವರು ದಾಖಲೆಗಳೊಂದಿಗೆ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ (ಇಂದು) ಸ್ಥಳದಲ್ಲಿದ್ದ ಮಾಧ್ಯಮದವರ ಹಾಗೂ ಸಾರ್ವಜನಿಕರ ಹೇಳಿಕೆಗಳನ್ನು ದಾಖಲಿಸಲು ಆಹ್ವಾನಿಸಲಾಗಿದೆ.
15 ದಿನಗಳ ಗಡುವು ವಿಸ್ತರಿಸಿಕೊಂಡಿರುವ ತನಿಖಾಧಿಕಾರಿ ಜಗದೀಶ್ ಅವರು ಮುಂದಿನ ವಾರ ವರದಿ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿ, ಆರ್ಸಿಬಿ, ಡಿಎನ್ಎ, ಕೆಎಸ್ಸಿಎ ಅಧಿಕಾರಿಗಳು ಹಾಗೂ ಬಂಡೋಬಸ್ತ್ ಕಾನೂನುಸುವ್ಯವಸ್ಥೆ ಸಿಬ್ಬಂದಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ.
ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅನುಮತಿಗೆ ಮುನ್ನ ಪ್ರಕಟಣೆ ಹೋಗಿದ್ದು ದುರಂತಕ್ಕೆ ಕಾರಣವಾಗಿದೆ.
ಬ್ಯಾರಿಕೇಡ್ಗಳು ಹಾಕದಿರುವುದು, ಸೂಕ್ತ ಭದ್ರತೆ ಇಲ್ಲದಿರುವುದು, ಉಚಿತ ಪ್ರವೇಶದ ಘೋಷಣೆ ಹಾಗೂ ಪೋಲಿಸ್ ನಿರ್ವಹಣೆಯ ಕೊರತೆ — ಇವುಗಳು ತನಿಖೆಯಲ್ಲಿ ಪತ್ತೆಯಾದ ಪ್ರಮುಖ ಅಂಶಗಳು.