ವಿದೇಶಾಂಗ ಸಚಿವ ಎಸ್. ಜೈಶಂಕರ್ (External Affairs Minister S. Jaishankar) ಅವರು ಪಾಕಿಸ್ತಾನದಲ್ಲಿ ಉಗ್ರರು ಧೈರ್ಯವಾಗಿ ಸುತ್ತಾಡುತ್ತಿದ್ದಾರೆ ಮತ್ತು ಅವರಿಗೆ ಪಾಕಿಸ್ತಾನ (Pakistan) ಸೇನೆಯ ಬೆಂಬಲವಿದೆ ಎಂದು ಹೇಳಿದ್ದಾರೆ.
ಅವರು ಡಚ್ ಮಾಧ್ಯಮದೊಂದಿಗೆ ಮಾತನಾಡುವ ವೇಳೆ, ಪಾಕಿಸ್ತಾನ ಮತ್ತು ಅದರ ಸೇನೆ ಭಯೋತ್ಪಾದನೆಯಲ್ಲಿ ನೇರವಾಗಿ ತೊಡಗಿಸಿಕೊಂಡಿವೆ ಎಂದು ತೀವ್ರ ವಾಗ್ದಾಳಿ ನಡೆಸಿದರು. “ಪಾಕಿಸ್ತಾನದಲ್ಲಿ ಉಗ್ರರ ಜಾಲಗಳು ಕಾರ್ಯನಿರ್ವಹಿಸುತ್ತಿವೆ ಎಂಬುದರ ಬಗ್ಗೆ ಅವರಿಗೆ ತಿಳಿದಿಲ್ಲ ಎಂದು ಭಾವಿಸುವುದು ತಪ್ಪು” ಎಂದು ಜೈಶಂಕರ್ ಹೇಳಿದರು.
ಜೈಶಂಕರ್ ಅವರು ಪ್ರಸ್ತುತ ನೆದರ್ಲ್ಯಾಂಡ್ ಪ್ರವಾಸದಲ್ಲಿದ್ದು, ಈ ಭೇಟಿಯ ಉದ್ದೇಶ ಭಾರತ ಮತ್ತು ನೆದರ್ಲ್ಯಾಂಡ್ ನಡುವಿನ ಸಂಬಂಧ ಬಲಪಡಿಸುವುದು. ಯುರೋಪಿಯನ್ ಒಕ್ಕೂಟವು ಭಾರತದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರವಾಗಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವದಾಗಿದೆ.
ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ, ವಿಶ್ವಸಂಸ್ಥೆಯಿಂದ ನಿಷೇಧಿತ ಉಗ್ರರು ಮುಕ್ತವಾಗಿ ಓಡಾಡುತ್ತಿದ್ದಾರೆ. ಅವರ ವಿಳಾಸವೂ ಎಲ್ಲರಿಗೂ ಗೊತ್ತಿದೆ. ಪಾಕಿಸ್ತಾನದ ಸರ್ಕಾರ ಮತ್ತು ಸೇನೆ ಈ ಕ್ರಿಯಾಕಲಾಪಗಳಲ್ಲಿ ಭಾಗವಹಿಸುತ್ತಿವೆ ಎಂದು ಅವರು ಆರೋಪಿಸಿದರು.
ಭಾರತ ಮೇ 7ರಂದು ನಡೆಸಿದ “ಆಪರೇಷನ್ ಸಿಂದೂರ್” ಅನ್ನು ಭಯೋತ್ಪಾದನೆಯ ವಿರುದ್ಧದ ಹೊಸ ನಿಲುವಾಗಿ ಅವರು ವರ್ಣಿಸಿದರು. ಈ ಕಾರ್ಯಾಚರಣೆಯಲ್ಲಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಉಗ್ರ ತಾಣಗಳನ್ನು ಭಾರತ ನಾಶಪಡಿಸಿದೆ. ಈ ಪ್ರತಿಕ್ರಿಯೆ, ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ದಾಳಿಗೆ ತಕ್ಷಣದ ಉತ್ತರವಾಗಿತ್ತು, ಅದರಲ್ಲಿ 26 ಜನ ಪ್ರಾಣ ಕಳೆದುಕೊಂಡಿದ್ದರು.
“ಭವಿಷ್ಯದಲ್ಲಿ ಮತ್ತೆ ಉಗ್ರ ದಾಳಿ ನಡೆದರೆ, ಅದರ ಪರಿಣಾಮ ಗಂಭೀರವಾಗುತ್ತದೆ” ಎಂದು ಜೈಶಂಕರ್ ಎಚ್ಚರಿಸಿದರು. ಭಾರತ ದಾಳಿಗಳಿಗೆ ತಕ್ಷಣ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಪಾಕಿಸ್ತಾನ ತಿಳಿಯಬೇಕು ಎಂದರು.
ಭಯೋತ್ಪಾದನೆಗೆ ಯಾವುದೇ ರೂಪದಲ್ಲಿಯೂ ನ್ಯಾಯವಿಲ್ಲ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಭಾಗವಾಗಿದ್ದು, ಪಾಕ್ ಆಕ್ರಮಿತ ಪ್ರದೇಶವನ್ನು ಹಿಂದಿರುಗಿಸಬೇಕು ಎಂದು ಅವರು ಪುನರುಚ್ಚರಿಸಿದರು. ಈ ವಿಷಯವು ಪಾಕಿಸ್ತಾನ ಮತ್ತು ಭಾರತದ ನಡುವೆ ದ್ವಿಪಕ್ಷೀಯ ವಿಷಯವಾಗಿದ್ದು, ಮೂರನೇ ಪಕ್ಷದ ಮಧ್ಯಸ್ಥಿಕೆ ಅನಾವಶ್ಯಕವಾಗಿದೆ ಎಂದು ಸ್ಪಷ್ಟಪಡಿಸಿದರು.