
Bengaluru: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕರ್ನಾಟಕದ ತೆರಿಗೆ ಹಂಚಿಕೆ ಕುರಿತ ಅಸಮತೋಲನ ಮತ್ತು ಅನ್ಯಾಯದ ವಿಚಾರವನ್ನು ಪರಿಶೀಲನೆ ಮಾಡುತ್ತೇವೆ ಎಂದು ಭರವಸೆ ನೀಡಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತಿಳಿಸಿದರು.
ದೆಹಲಿಗೆ ಭೇಟಿಗೆ ತೆರಳಿದ್ದ ಸಿದ್ದರಾಮಯ್ಯ ಅವರು ಮಂಗಳವಾರ ನಿರ್ಮಲಾ ಸೀತಾರಾಮನ್ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ, ತೆರಿಗೆ ಹಂಚಿಕೆ ಹಾಗೂ ರಾಜ್ಯಕ್ಕೆ ಸಂಬಂಧಿಸಿದ ಮಸೂದೆಗಳಿಗೆ ಅನುಮೋದನೆ ಬೇಕೆಂಬ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ಸಿಎಂ ಸಿದ್ದರಾಮಯ್ಯ ಅವರ ಪ್ರಕಾರ, 14ನೇ ಹಣಕಾಸು ಆಯೋಗದಲ್ಲಿ 4.7% ಅನುದಾನ ದೊರೆತಿತ್ತು. ಆದರೆ 15ನೇ ಹಣಕಾಸು ಆಯೋಗದಲ್ಲಿ ಕಡಿಮೆ ಅನುದಾನ ನೀಡಲಾಗಿದೆ. ವಿಶೇಷ ಅನುದಾನದ ರೂಪದಲ್ಲಿ ಒಟ್ಟು ₹91 ಸಾವಿರ ಕೋಟಿ ರೂಪಾಯಿ ಕರ್ನಾಟಕಕ್ಕೆ ಬರಬೇಕಿದ್ದು, ಉಳಿದ ತಿಂಗಳಲ್ಲಿ ಈ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಈ ಬಗ್ಗೆ ನಿರ್ಮಲಾ ಸೀತಾರಾಮನ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದಿದ್ದಾರೆ.
ಇದರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಅವರು ರಾಜ್ಯಪಾಲರಿಂದ ಕಳುಹಿಸಲಾದ ವಿವಿಧ ಮಸೂದೆಗಳಿಗೆ ಅನುಮೋದನೆ ನೀಡುವಂತೆ ವಿನಂತಿಸಿದರು. ಈ ಮಸೂದೆಗಳಲ್ಲಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಸೂದೆ, ಕರ್ನಾಟಕ ತೆರಿಗೆ ಮಸೂದೆ – 2024, ನೊಂದಣಿ ಮತ್ತು ನೋಟರಿಗಳ ತಿದ್ದುಪಡಿ ಮಸೂದೆಗಳು, ಪಾರದರ್ಶಕತೆ ಕಾಯ್ದೆ ತಿದ್ದುಪಡಿ, ಹಿಂದೂ ಧಾರ್ಮಿಕ ಸಂಸ್ಥೆಗಳ ತಿದ್ದುಪಡಿ ಮಸೂದೆಗಳು ಸೇರಿವೆ.
ಭೇಟಿಯ ಸಂದರ್ಭ, ಸಿಎಂ ಸಿದ್ದರಾಮಯ್ಯ ಮತ್ತು ಬಾಲಿವುಡ್ ನಟ ಅಮೀರ್ ಖಾನ್ ಭೇಟಿಯಾಗಿ ಪರಸ್ಪರ ಮಾತುಕತೆ ನಡೆಸಿದರು. ಸಿದ್ದರಾಮಯ್ಯ ಅವರು ಅಮೀರ್ ಖಾನ್ಗೆ ಶುಭಹಾರೈಸಿದರು.
ಈ ಭೇಟಿಯಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಮಹದೇವಪ್ಪ, ಕೆ.ಜೆ. ಜಾರ್ಜ್ ಮತ್ತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.