Mumbai: ಪ್ರಸಿದ್ಧ ಸ್ಟ್ಯಾಂಡ್ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು (Deputy Chief Minister Shinde) “ನಂಬಿಕೆ ದ್ರೋಹಿ” ಎಂದು ಟೀಕಿಸಿದ್ದಕ್ಕೆ ಶಿಂಧೆ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಶಿಂಧೆ, “ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ, ಆದರೆ ವಿಡಂಬನೆಗೂ ಒಂದು ಮಿತಿ ಇರಬೇಕು. ಟೀಕೆ ಮಾಡುವಾಗ ಸಭ್ಯತೆಯನ್ನು ಕಾಪಾಡಿಕೊಳ್ಳಬೇಕು, ಇಲ್ಲದಿದ್ದರೆ ಅದಕ್ಕೆ ಪ್ರತಿಕ್ರಿಯೆ ಉಂಟಾಗುವುದು,” ಎಂದು ತಿಳಿಸಿದ್ದಾರೆ.
ಕುನಾಲ್ ಕಾಮ್ರಾ ತಮ್ಮ ಶೋನಲ್ಲಿ ಏಕನಾಥ್ ಶಿಂಧೆ ಮತ್ತು ಶಿವಸೇನೆಯನ್ನು ಟೀಕಿಸುತ್ತಾ, “ಶಿವಸೇನಾ ಬಿಜೆಪಿಯಿಂದ ಹೊರಬಂದಿತು, ನಂತರ ಶಿವಸೇನೆಯೇ ಶಿವಸೇನೆಯಿಂದ ಹೊರಬಂದಿತು,” ಎಂದು ವ್ಯಂಗ್ಯವಾಡಿದ್ದರು. ಇದಲ್ಲದೆ, ಶಿಂಧೆ ವಿರುದ್ಧ ಒಂದು ಹಾಡು ಹಾಡುತ್ತಾ, ಅವರನ್ನು ನಂಬಿಕೆ ದ್ರೋಹಿ ಎಂದು ಕರೆದಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಶಿವಸೇನಾ ಕಾರ್ಯಕರ್ತರು ಕ್ರೋಧಗೊಂಡು, ಕಾಮಿಡಿ ಶೋ ನಡೆದ ಹೋಟೆಲ್ಗೆ ದಾಳಿ ನಡೆಸಿದರು. ಹೋಟೆಲ್ನಲ್ಲಿ ಕೋಲಾಹಲ ಸೃಷ್ಟಿಸಿ, ಟೇಬಲ್-ಕುರ್ಚಿಗಳನ್ನು ಪುಡಿಗಟ್ಟಿದರು.
“ಇದು ವಾಕ್ ಸ್ವಾತಂತ್ರ್ಯವಲ್ಲ, ಯಾರಿಗೋಸ್ಕರ ಕೆಲಸ ಮಾಡುತ್ತಿರುವಂತೆ ಕಾಣುತ್ತದೆ,” ಎಂದು ಶಿಂಧೆ ಟಾಂಗ್ ಕೊಟ್ಟಿದ್ದಾರೆ. ಅವರು ಕಾಮ್ರಾ ಹಿಂದೆಯೂ ಸುಪ್ರೀಂ ಕೋರ್ಟ್, ಪ್ರಧಾನಿ ಮತ್ತು ಕೈಗಾರಿಕೋದ್ಯಮಿಗಳನ್ನು ಟೀಕಿಸಿರುವುದನ್ನು ಉಲ್ಲೇಖಿಸಿದರು.
ಈ ವಿವಾದ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಯಾಗಿದ್ದು, ಇದರಿಂದ ಪಲಿತಾಂಶ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.