New Delhi: ಭಾರತ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಬೇಕೆಂಬ ಗುರಿಯೊಂದಿಗೆ ಚಿಂತನ್ ರಿಸರ್ಚ್ ಫೌಂಡೇಶನ್ (Chintan Foundation) ಕಾರ್ಯನಿರ್ವಹಿಸುತ್ತಿದೆ ಎಂದು ಅದಾನಿ ಎಂಟರ್ಪ್ರೈಸಸ್ ನಿರ್ದೇಶಕ ಪ್ರಣವ್ ಅದಾನಿ (Pranav Adani) ಹೇಳಿದರು. ಫೌಂಡೇಶನ್ ನ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹವಾಮಾನ ಬದಲಾವಣೆ, ಇಂಧನ ಪರಿವರ್ತನೆ, ಜಾಗತಿಕ ಆರ್ಥಿಕತೆ, ಪೂರೈಕೆ ಸರಪಳಿಗಳು, ವ್ಯಾಪಾರ ಸಂಬಂಧಗಳು ಮತ್ತು ಜಿಯೋಪಾಲಿಟಿಕ್ಸ್ (ಭೌಗೋಳಿಕ ರಾಜಕೀಯ)ಂತಹ ಪ್ರಮುಖ ವಿಷಯಗಳ ಕುರಿತು ಸಂಶೋಧನೆ ಮಾಡಲು ಫೌಂಡೇಶನ್ ಹುಟ್ಟಿಕೊಂಡಿದೆ ಎಂದರು.
ಅವರು ಮುಂದುವರೆದು, ಚಿಂತನ್ ಫೌಂಡೇಶನ್ ಮೂರು ಮುಖ್ಯ ಕ್ಷೇತ್ರಗಳಾದ ಆರ್ಥಿಕತೆ ಮತ್ತು ವ್ಯಾಪಾರ, ಭಾರತದಲ್ಲಿನ ಭೌಗೋಳಿಕ ರಾಜಕೀಯ ಸಮಸ್ಯೆಗಳು ಮತ್ತು ಇಂಧನ ವ್ಯವಹಾರಗಳ ಮೇಲೆ ಗಮನಹರಿಸಲಿದೆ ಎಂದು ವಿವರಿಸಿದರು.
2047ರ ವರೆಗೆ ಭಾರತವನ್ನು ಸಂಪೂರ್ಣ ಶಕ್ತಿಯುತವಾಗಿ ಅಭಿವೃದ್ಧಿಪಡಿಸಲು ದೊಡ್ಡ ಮಟ್ಟದ ಬದಲಾವಣೆ ಅಗತ್ಯವಿದೆ ಎಂದು ಪ್ರಣವ್ ಅದಾನಿ ಹೇಳಿದರು. ಜಾಗತಿಕ ದಕ್ಷಿಣದ (Global South) ಭವಿಷ್ಯದಲ್ಲಿ ಭಾರತ ಪ್ರಮುಖ ಪಾತ್ರವಹಿಸಬೇಕು ಎಂಬುದು ಈ ಫೌಂಡೇಶನ್ನ ದೃಷ್ಟಿಕೋನವಾಗಿದೆ.
ಅದಾನಿ ಸಂಸ್ಥೆ ಕಳೆದ 30 ವರ್ಷಗಳಿಂದ ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ತೊಡಗಿಸಿಕೊಂಡಿದ್ದು, ಅದೇ ದಿಕ್ಕಿನಲ್ಲಿ ಚಿಂತನ್ ಫೌಂಡೇಶನ್ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು. ಭಾರತ ಎಂದರೆ ಕೇವಲ ದೆಹಲಿ ಅಥವಾ ಮೆಟ್ರೋ ನಗರಗಳಷ್ಟೆ ಅಲ್ಲ, ಅದು ದೇಶದ ಹೃದಯಭಾಗದಲ್ಲಿಯೂ ಜೀವಿಸುತ್ತಿದೆ. ಈ ಕಾರಣದಿಂದ ಫೌಂಡೇಶನ್ ದೃಷ್ಟಿ ದೆಹಲಿ, ಮೆಟ್ರೋ ನಗರಗಳಷ್ಟೇ ಅಲ್ಲದೇ ರಾಂಚಿ, ರಾಯ್ಪುರ, ಭುವನೇಶ್ವರ ಹಾಗೂ ಈಶಾನ್ಯ ಭಾರತದತ್ತ ಕೂಡ ವಿಸ್ತರಿಸಲಿದೆ ಎಂದು ತಿಳಿಸಿದರು.
ಇಸ್ರೇಲ್–ಇರಾನ್ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ, ಅದಾನಿ ಗುಂಪು ತನ್ನ ವಿದೇಶಿ ಯೋಜನೆಗಳ ಭದ್ರತೆಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ ಎಂದು ಪ್ರಣವ್ ಸ್ಪಷ್ಟಪಡಿಸಿದರು. ಆದರೆ ಈವರೆಗೆ ಯಾವುದೇ ಆಸ್ತಿ ಅಪಾಯದಲ್ಲಿಲ್ಲ ಎಂಬ ಭರವಸೆಯನ್ನೂ ನೀಡಿದ್ದಾರೆ.
ಚಿಂತನ್ ಫೌಂಡೇಶನ್ ನ ಕಾರ್ಯಕ್ರಮದಲ್ಲಿ ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಮಾತನಾಡಿ, ಚಿಂತಕರ ಚಾವಡಿಗಳು ಧೈರ್ಯದಿಂದ ಮತ್ತು ಸ್ಪಷ್ಟತೆಯಿಂದ ವಿಚಾರಗಳನ್ನು ಮುಂದಿಡಬೇಕು ಎಂದು ಹೇಳಿದರು. ಭಾರತವಂಥ ರಾಷ್ಟ್ರದಲ್ಲಿ ವಿಶ್ಲೇಷಣಾತ್ಮಕ ಚಿಂತನೆಯ ಅಗತ್ಯತೆಯನ್ನೂ ಅವರು ಒತ್ತಿಹೇಳಿದರು.