Bengaluru: ರಾಜ್ಯ ಸರ್ಕಾರದ ಬೆಲೆ ಏರಿಕೆ (Price Hike) ಖಂಡಿಸಿ ಬಿಜೆಪಿ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಿರಿಯ ನಾಯಕರು ಧರಣಿಯಲ್ಲಿ ಭಾಗಿಯಾಗಿದ್ದಾರೆ.
ಮಧ್ಯಾಹ್ನ 12 ಗಂಟೆಯಿಂದಲೇ ಯಡಿಯೂರಪ್ಪ ಧರಣಿಯಲ್ಲಿ ಇದ್ದು, ರಾತ್ರಿ ನಡೆದರೂ ಹೋರಾಟ ಮುಂದುವರೆಸಿದ್ದಾರೆ. ಇತರ ಬಿಜೆಪಿ ನಾಯಕರು ಕೂಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯಿಂದ ಶೋಕಾಸ್ ನೋಟೀಸ್ ಪಡೆದ ಶಾಸಕ ಬಿ.ಪಿ. ಹರೀಶ್ ಕೂಡ ಧರಣಿಗೆ ಆಗಮಿಸಿದ್ದು, ವಿಜಯೇಂದ್ರ ಬೆಂಬಲಿಗರೊಬ್ಬರು ಅವರಿಗೆ ವಿರೋಧ ವ್ಯಕ್ತಪಡಿಸಿದರು. ಧರಣಿಯಲ್ಲಿ “ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ” ಎಂಬ ಘೋಷಣೆಗಳು ಕೇಳಿಬಂದವು.
ಹೋರಾಟದಲ್ಲಿ ಮಾಜಿ ಶಾಸಕರಾದ ನಡಹಳ್ಳಿ, ರೇಣುಕಾಚಾರ್ಯ, ಜೀವರಾಜ್ ವಿಜಯೇಂದ್ರರನ್ನು ಶ್ಲಾಘಿಸಿದರು. ಎಂ.ಪಿ. ರೇಣುಕಾಚಾರ್ಯ ವಿಜಯೇಂದ್ರಗೆ ಭಾರೀ ಜನಬೆಂಬಲವಿದ್ದು, ಹೋರಾಟ ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟರು.
ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಪಿ. ಹರೀಶ್, “ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದು ಪಕ್ಷದ ಹೋರಾಟ, ನಾನು ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತೇನೆ. ಶೋಕಾಸ್ ನೋಟೀಸ್ ಬಗ್ಗೆ ನನಗೆ ಆತಂಕವಿಲ್ಲ. ವಿಜಯೇಂದ್ರ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ” ಎಂದು ಸ್ಪಷ್ಟಪಡಿಸಿದರು.