Chamarajanagar: ಇಂದು ಮುಂಜಾನೆ 2:40ಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಗೆ (Bomb threat) ಒಳಗಾಗಿದ್ದು, ಕಚೇರಿ ಸ್ಫೋಟಗೊಳ್ಳಲಿದೆ ಎಂದು ಸಂದೇಶವೊಂದು ಬಂದಿತ್ತು. ತಮಿಳುನಾಡಿನ ಬಾಂಬ್ ಪ್ರಕರಣಗಳನ್ನು ಉಲ್ಲೇಖಿಸಿ, ಅಪರಿಚಿತ ವ್ಯಕ್ತಿ ಈ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಮಧ್ಯಾಹ್ನ 3 ಗಂಟೆಗೆ ಪೈಪ್ ಒಳಗೆ ಅಡಗಿಸಿರಿಸಿದ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಹೇಳಲಾಗಿದೆ.
ಡಿಸಿ ಶಿಲ್ಪಾನಾಗ್ ಮತ್ತು ಎಸ್ಪಿ ಡಾ. ಬಿ.ಟಿ. ಕವಿತಾ ಕೂಡಲೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ. ಕಚೇರಿ ಸಿಬ್ಬಂದಿಯನ್ನು ಹೊರ ಕಳುಹಿಸಲಾಗಿದ್ದು, ಸಾರ್ವಜನಿಕರ ಪ್ರವೇಶವನ್ನು ನಿಲ್ಲಿಸಲಾಗಿದೆ. ಬಾಂಬ್ ಪತ್ತೆದಳ ಮತ್ತು ಶ್ವಾನದಳದಿಂದ ಭವನವನ್ನು ಪರಿಶೀಲನೆ ಮಾಡಲಾಗುತ್ತಿದೆ. ಡಿಸಿ ಹಾಗೂ ಇತರ ಅಧಿಕಾರಿಗಳು ಮರದ ಕೆಳಗೆ ಕುಳಿತು ಕರ್ತವ್ಯ ನಿರ್ವಹಿಸಿದ್ದಾರೆ.
ಡಿಸಿ ಶಿಲ್ಪಾನಾಗ್ ಮಾಧ್ಯಮದೊಂದಿಗೆ ಮಾತನಾಡಿ, ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಿದ್ದು, ರಾಜ್ಯ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ರಾಯಚೂರು: ಇಂದಿನ ಬೆಳಿಗ್ಗೆ 6:30ರ ಸುಮಾರಿಗೆ ರಾಯಚೂರು ಜಿಲ್ಲಾಧಿಕಾರಿ ಕಚೇರಿಗೂ ಇಂತಹದೇ ಇ-ಮೇಲ್ ಬಂದಿದೆ. ಯಕ್ಲಾಸಪುರದಲ್ಲಿ ಇರುವ ನೂತನ ಡಿಸಿ ಕಚೇರಿಯನ್ನು ಮಧ್ಯಾಹ್ನ 3 ಗಂಟೆಗೆ ಸ್ಫೋಟಗೊಳಿಸಲಾಗುತ್ತದೆ ಎಂದು ಸಂದೇಶದಲ್ಲಿತ್ತು.
ಜಿಲ್ಲಾಡಳಿತ ಕಚೇರಿ ಸಿಬ್ಬಂದಿಗೆ ಹೊರಗೆ ಹೋಗಲು ಸೂಚನೆ ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬಾಂಬ್ ನಿಷ್ಕ್ರಿಯ ದಳವೂ ಕಾರ್ಯನಿರತವಾಗಿದೆ.
ಈ ಎರಡು ಜಿಲ್ಲೆಗಳಲ್ಲಿ ಬಂದ ಬಾಂಬ್ ಬೆದರಿಕೆ ಸಂದೇಶಗಳು ಆತಂಕ ಉಂಟುಮಾಡಿದರೂ, ಅಧಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.