Thiruvananthapuram: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿ, ನಿವಾಸ ಮತ್ತು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ (Bomb threat) ಕರೆಗಳು ಬಂದಿವೆ. ಇಂದು ಮುಂಜಾನೆ, ಕೊಚ್ಚಿ ವಿಮಾನ ನಿಲ್ದಾಣಕ್ಕೂ ಬಾಂಬ್ ಬೆದರಿಕೆ ಕರೆ ಬಂದಿದ್ದು, ಅಧಿಕಾರಿಗಳು ತಕ್ಷಣ ಬಾಂಬ್ ಸ್ಕ್ವಾಡ್ ನಿಯೋಜಿಸಿ ಶೋಧ ಕಾರ್ಯ ಆರಂಭಿಸಿದರು.
ಮುಖ್ಯಮಂತ್ರಿ ಕಚೇರಿ ಮತ್ತು ನಿವಾಸಕ್ಕೆ ಈ ಬೆದರಿಕೆ ಇ-ಮೇಲ್ ಮೂಲಕ ಬಂದಿದ್ದು, ಕೇರಳ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸ್ನಿಫರ್ ನಾಯಿಗಳು ಮತ್ತು ವಿಶೇಷ ತಂಡಗಳ ಸಹಾಯದಿಂದ ಸಂಪೂರ್ಣ ಪ್ರದೇಶ ಪರಿಶೀಲನೆ ನಡೆಯುತ್ತಿದೆ. ಈಗಾಗಲೇ ಎರಡೂ ಸ್ಥಳಗಳಲ್ಲಿ ಸ್ಫೋಟಕ ಪತ್ತೆಯಾಗಿಲ್ಲ.
ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 7:53ಕ್ಕೆ ಒಂದು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶವಿದ್ದು, “CIALನಲ್ಲಿ RDX ಬಾಂಬ್ ಇಡಲಾಗಿದೆ, ಮಧ್ಯಾಹ್ನ 2 ಗಂಟೆಯೊಳಗೆ ಎಲ್ಲರೂ ಓಡಿ ಹೋಗಿ” ಎಂದು ಬರೆಯಲಾಗಿತ್ತು.
ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿ ಬೆಳಗ್ಗೆ 8:55ಕ್ಕೆ ಸಭೆ ನಡೆಸಿ ತಕ್ಷಣದ ಭದ್ರತಾ ಕ್ರಮಗಳನ್ನು ಜಾರಿಗೆ ತಂದಿತು. ಸಿಐಎಸ್ಎಫ್ (CISF) ಹಾಗೂ ರಾಜ್ಯ ಪೊಲೀಸರು ವಿಮಾನ ನಿಲ್ದಾಣ ಮತ್ತು ನಗರದ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿದರು.
ದಕ್ಷಿಣ ಭಾರತದ ಎಲ್ಲಾ ವಿಮಾನಗಳಿಗೆ ಭದ್ರತಾ ಕ್ರಮ ಹೆಚ್ಚಿಸಲು ಸೂಚನೆ ನೀಡಲಾಗಿದೆ. ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (CIAL) ರಾಜ್ಯ ಪೊಲೀಸರಿಗೆ ದೂರು ನೀಡಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ಹಂಚಲಾಗಿದೆ.