Ranchi: ನಮ್ಮ ಸರ್ಕಾರ ಉಳಿಯಲಿ ಅಥವಾ ಹೋಗಲಿ, ಆದರೆ ಕೇಂದ್ರದ ಕ್ಷೇತ್ರ ಪುನರ್ವಿಂಗಡಣೆಯನ್ನು ನಾವು ಅನುಮತಿಸುವುದಿಲ್ಲ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ (harkhand Chief Minister Hemant Soren) ಸ್ಪಷ್ಟವಾಗಿ ಹೇಳಿದ್ದಾರೆ.
ಜಾರ್ಖಂಡ್ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಸೊರೇನ್, ಈ ಪುನರ್ವಿಂಗಡಣೆಯ ಹಿಂದೆ ಗುಪ್ತ ಉದ್ದೇಶವಿದೆ ಎಂದು ಆರೋಪಿಸಿದರು. ಇದರಿಂದ ಬುಡಕಟ್ಟು ಮತ್ತು ದಲಿತ ಸಮುದಾಯಗಳಿಗಾಗಿ ಮೀಸಲಾಗಿರುವ ಸೀಟುಗಳನ್ನು ಕಡಿತಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು. ಈ ಹಿಂದೆ ದಿಶೋಮ್ ಗುರು ಶಿಬು ಸೊರೇನ್ ಅವರ ನೇತೃತ್ವದಲ್ಲಿ ಇಂತಹ ಪ್ರಯತ್ನವನ್ನು ತಡೆಯಲಾಗಿತ್ತು. ಆದರೆ ಈ ಬಾರಿ ಇದನ್ನು ಅತ್ಯಂತ ಚಾಣಾಕ್ಷತೆಯಿಂದ ದೇಶಾದ್ಯಂತ ಜಾರಿಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಸೊರೇನ್ ಕಿಡಿಕಾರಿದರು.
“ನಾವು ಸರ್ಕಾರದಲ್ಲಿದ್ದರೂ ಅಥವಾ ಇಲ್ಲದಿದ್ದರೂ, ಇದರ ವಿರುದ್ಧ ಹೋರಾಟ ಮಾಡುತ್ತೇವೆ,” ಎಂದು ಕೇಂದ್ರ ಸರ್ಕಾರಕ್ಕೆ ಬಹಿರಂಗ ಸವಾಲು ಹಾಕಿದ ಸಿಎಂ, ಈ ನಿಲುವಿನಲ್ಲಿ ಯಾವುದೇ ಅಡಚಣೆ ಬರಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.
ಒಟ್ಟು 1 ಗಂಟೆ 12 ನಿಮಿಷಗಳ ಕಾಲ ಮಾತನಾಡಿದ ಸೊರೇನ್, ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಆದರೆ ಅವರ ಭಾಷಣದ ವೇಳೆ ಬಿಜೆಪಿ ಶಾಸಕರು ಸದನದಲ್ಲಿರಲಿಲ್ಲ. “ಬಿಜೆಪಿ ನಾಯಕರು ರಾಜ್ಯದ ಮತ್ತು ದೇಶದ ಅಭಿವೃದ್ಧಿ ಕುರಿತು ಮಾತನಾಡುತ್ತಾರೆ, ಆದರೆ ಕಾರ್ಯಗತಗೊಳಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ,” ಎಂದು ಅವರು ಆರೋಪಿಸಿದರು.
“ನಮ್ಮ ರಾಜ್ಯ ಮತ್ತು ಇಲ್ಲಿನ ಜನರ ಪ್ರಗತಿ ಬಿಜೆಪಿಗೆ ಇಷ್ಟವಿಲ್ಲ. ನಮ್ಮ ಜನರು ಮುಂದೆ ಬರುವುದನ್ನು ಅವರು ಸಹಿಸಿಕೊಳ್ಳಲಾರರು,” ಎಂದು ಕೇಂದ್ರ ಸರ್ಕಾರದ ವಿರುದ್ಧ ಸೊರೇನ್ ಕಿಡಿಕಾರಿದರು. ಅವರು ಅನಿಲ್ ಟೈಗರ್ ಹತ್ಯೆ ಪ್ರಕರಣ, ತಮ್ಮ ಸರ್ಕಾರದ ಸಾಧನೆ, ಹಾಗೂ ಭವಿಷ್ಯದ ಜಾರ್ಖಂಡ್ ಬಗ್ಗೆ ಹಲವು ವಿಚಾರಗಳನ್ನು ಈ ಸಂದರ್ಭ ಪ್ರಸ್ತಾಪಿಸಿದರು.