
Belagavi: ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಅವರ “ಹಣ ನೀಡಿದವರಿಗೆ ಮಾತ್ರ ಮನೆ ಮಂಜೂರು” ಆಡಿಯೋ ವೈರಲ್ ಆದ ಬೆನ್ನಲ್ಲೇ, ಇದೀಗ ಮತ್ತೊಬ್ಬ ಕಾಂಗ್ರೆಸ್ ಶಾಸಕ ರಾಜು ಕಾಗೆ (Congress MLA Raju Kage) ಅವರು ತಮ್ಮದೇ ಸರ್ಕಾರದ ವಿರುದ್ಧ ಗಂಭೀರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಟೀಲ್ ಹೇಳಿದ್ದು ನಿಜ – ನನ್ನ ಪರಿಸ್ಥಿತಿಯೂ ಅದೇ” ಎಂದು ಅವರು ಹೇಳಿದ್ದಾರೆ. ಐನಾಪುರ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನಮ್ಮ ಸರ್ಕಾರದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆಡಳಿತವೇ ಹಾಳಾಗಿದೆ,” ಎಂದು ಕಿಡಿಕಾರಿದ್ದಾರೆ.
ರಾಜು ಕಾಗೆ ಅವರು, “25 ಕೋಟಿ ಅನುದಾನ ಕೊಟ್ಟರೂ ಎರಡು ವರ್ಷವಾದರೂ ಕೆಲಸ ಆರಂಭವಾಗಿಲ್ಲ. ನನ್ನ ಮನಸ್ಸಿಗೆ ಬಹಳ ನೋವಾಗಿದೆ. ನಾನು ರಾಜೀನಾಮೆ ನೀಡುವ ಪರಿಸ್ಥಿತಿಯಲ್ಲಿದ್ದೇನೆ. ಎರಡು ದಿನಗಳಲ್ಲಿ ಮುಖ್ಯಮಂತ್ರಿಗೆ ರಾಜೀನಾಮೆ ನೀಡಿದರೂ ಆಶ್ಚರ್ಯವಿಲ್ಲ,” ಎಂದು ಹೇಳಿದರು. ಆದರೆ ಅವರು ಶಾಸಕರ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದಾರೆವೋ ಅಥವಾ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಎಂದಾದರೂ ಸ್ಪಷ್ಟವಿಲ್ಲ.
ಈ ಕುರಿತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಪ್ರತಿಕ್ರಿಯಿಸಿ, “ನೀವು ರಾಜೀನಾಮೆ ಕೊಟ್ಟರೆ ಸಮಸ್ಯೆ ಸುಧಾರಿಸದು. ಮುಖ್ಯಮಂತ್ರಿಗೆ ರಾಜೀನಾಮೆ ಕೊಡಿಸಿ. ಜನರ ಮುಂದೆ ಹೋಗಿ ತೀರ್ಮಾನವಾಗಲಿ,” ಎಂದಿದ್ದಾರೆ. ಜೊತೆಗೆ, “ಬಿಜೆಪಿಗೆ ಯಾರಾದರೂ ಬರಲು ನಾವು ಸ್ವಾಗತ ನೀಡುತ್ತೇವೆ” ಎಂದೂ ಹೇಳಿದರು.
ಪರಿಷತ್ ಸದಸ್ಯ ಸಿ.ಟಿ. ರವಿ ಅವರು, “ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ. ಬಿಆರ್ ಪಾಟೀಲ್ ಹೇಳಿಕೆಯ ಬಗ್ಗೆ ನ್ಯಾಯಮೂರ್ತಿಯ ನೇತೃತ್ವದಲ್ಲಿ ತನಿಖೆ ಆಗಬೇಕು. ಆದರೆ ಅದಕ್ಕೂ ಮುನ್ನ ಜಮೀರ್ ಅಹ್ಮದ್ ರಾಜೀನಾಮೆ ನೀಡಬೇಕು” ಎಂದಿದ್ದಾರೆ.