
Devanahalli: ದೇಶದ ಮೊದಲ ಸೌರಶಕ್ತಿ ಆಧಾರಿತ ಇಲೆಕ್ಟ್ರಿಕ್ ವಾಹನ (EV) ಚಾರ್ಜಿಂಗ್ (EV Charging) ಕೇಂದ್ರವನ್ನು ದೇವನಹಳ್ಳಿಯ (Devanahalli) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಉದ್ಘಾಟಿಸಲಾಗಿದೆ. ಈ ಕೇಂದ್ರದಲ್ಲಿ ಸೂರ್ಯಶಕ್ತಿಯನ್ನು ಬಳಸಿ ಸೆಕೆಂಡ್ ಲೈಫ್ ಬ್ಯಾಟರಿಗಳನ್ನು ಉಪಯೋಗಿಸಿ ವಾಹನ ಚಾರ್ಜಿಂಗ್ ಮಾಡಲಾಗುತ್ತದೆ.
ಈ ಚಾರ್ಜಿಂಗ್ ಹಬ್ನಲ್ಲಿ ಒಟ್ಟಾರೆ 23 ಇವಿ ವಾಹನಗಳನ್ನು ಒಂದೇ ಸಮಯದಲ್ಲಿ ಚಾರ್ಜ್ ಮಾಡಬಹುದು. ಇದರಲ್ಲಿ 18 ಕಾರುಗಳ ಚಾರ್ಜಿಂಗ್ ಸಾಮರ್ಥ್ಯವೂ ಇದೆ. ಬೆಸ್ಕಾಂ ಮತ್ತು ಜರ್ಮನ್ ಸಂಸ್ಥೆಯೊಂದಿಗಿನ ಸಹಕಾರದಿಂದ ಈ ಯೋಜನೆ ರೂಪುಗೊಂಡಿದೆ. ಪ್ರತಿಯೊಂದು ಯೂನಿಟ್ಗೆ ₹7 ದರ ನಿಗದಿಪಡಿಸಲಾಗಿದೆ.
ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಮಾತನಾಡಿ, “ರಾಜ್ಯದಲ್ಲಿ ಈಗಾಗಲೇ 5,880 EV ಚಾರ್ಜಿಂಗ್ ಕೇಂದ್ರಗಳಿವೆ. ಇವುಗಳಲ್ಲಿ ಬೆಂಗಳೂರಿನಲ್ಲಿ 4,462 ಕೇಂದ್ರಗಳಿವೆ. ಶೇ. 65ರಷ್ಟು ವಿದ್ಯುತ್ ನವೀಕರಿಸಬಹುದಾದ ಇಂಧನದಿಂದ ಉತ್ಪತ್ತಿಯಾಗುತ್ತಿದೆ” ಎಂದು ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಹತ್ತಿರ ಈ ಕೇಂದ್ರ ನಿರ್ಮಾಣವಾಗಿರುವುದರಿಂದ ಕ್ಯಾಬ್ ಚಾಲಕರು ಮತ್ತು ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ದೇವನಹಳ್ಳಿಯ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡ ಪ್ರತಿಮೆ ಸುತ್ತ ನಿರ್ಮಾಣವಾಗುತ್ತಿರುವ ಥೀಮ್ ಪಾರ್ಕ್ ಕಾಮಗಾರಿಯನ್ನು ಪರಿಶೀಲಿಸಿದರು. ಈ ಪಾರ್ಕ್ಗಾಗಿ ₹20 ಕೋಟಿ ಹಣವನ್ನು ಸರ್ಕಾರ ಮೀಸಲಿಟ್ಟಿದೆ. ಈ ಪಾರ್ಕ್ನಲ್ಲಿ ಲ್ಯಾಂಡ್ಸ್ಕೇಪ್, ವೀಕ್ಷಣಾ ಗ್ಯಾಲರಿ ಮತ್ತು ಲೈಟಿಂಗ್ ವ್ಯವಸ್ಥೆ ಸೇರಿದೆ.
ಥೀಮ್ ಪಾರ್ಕ್ನ ಶೇಕಡಾ 70 ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಬಾಕಿಯ ಭಾಗ ಮುಂದಿನ ನಾಲ್ಕು ತಿಂಗಳಲ್ಲಿ ಮುಗಿಯಲಿದೆ. ವಿಮಾನ ನಿಲ್ದಾಣ ಪ್ರಾಧಿಕಾರ ₹6 ಕೋಟಿ ವೆಚ್ಚದಲ್ಲಿ ಲೈಟಿಂಗ್ ವ್ಯವಸ್ಥೆ ಒದಗಿಸಲು ಮುಂದಾಗಿದೆ.
ಜಿಲ್ಲಾಧಿಕಾರಿ ಎ.ಬಿ. ಬಸವರಾಜು, ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಷಾರಾಣಿ ಮತ್ತು ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.