Bengaluru: ದೇಶದಲ್ಲಿಯೇ ಮೊದಲ ಬಾರಿ ಸೈಬರ್ ಕಮಾಂಡ್ ಸೆಂಟರ್ (Cyber Command Center) ಅನ್ನು ಸ್ಥಾಪಿಸಿರುವ ಹೆಗ್ಗಳಿಕೆಯನ್ನು ಕರ್ನಾಟಕ ರಾಜ್ಯ ಪಡೆದುಕೊಂಡಿದೆ. ಸೈಬರ್ ಅಪರಾಧಗಳ ತನಿಖೆಗೆ ಸಹಾಯವಾಗುವ ಈ ಸೆಂಟರ್ನ್ನು ರಾಜ್ಯ ಸರ್ಕಾರ ಚಾಲನೆ ನೀಡಿದೆ. ಈಗಿನಿಂದ ಕರ್ನಾಟಕದಲ್ಲಿರುವ ಈ ವಿಶೇಷ ಘಟಕವು ಸೈಬರ್ ಅಪರಾಧಗಳನ್ನು ತಡೆಯಲು ಮತ್ತು ತನಿಖೆ ನಡೆಸಲು ಪ್ರಮುಖ ಪಾತ್ರವಹಿಸಲಿದೆ.
ಈ ಘಟಕದ ಡಿಐಜಿಯಾಗಿ ಭೂಷಣ್ ಬೊರಸೆ ಅವರನ್ನು ನೇಮಕ ಮಾಡಲಾಗಿದೆ. ಮುಂದಿನ ಹಂತಗಳಲ್ಲಿ ಐಜಿಪಿ, SP ಮತ್ತು ಇತರ ಸಿಬ್ಬಂದಿಯನ್ನು ಕೂಡ ನೇಮಿಸಲಾಗುವುದು. ಈ ಘಟಕದ ಸಂಪೂರ್ಣ ಹೊಣೆಗಾರಿಕೆಯನ್ನು ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ಅವರಿಗೆ ನೀಡಲು ನಿರ್ಧರಿಸಲಾಗಿದೆ. ಅಧಿಕೃತ ಆದೇಶ ಶೀಘ್ರದಲ್ಲೇ ಹೊರ ಬೀಳಲಿದೆ.
ಈ ಘಟಕವು ಸೈಬರ್ ಭದ್ರತೆ, ಹ್ಯಾಕಿಂಗ್, ಡೇಟಾ ಕಳವು, ಡೀಪ್ಫೇಕ್ಗಳು, ransomware ದಾಳಿ, sextortion, ಮಹಿಳೆಯರು ಮತ್ತು ಮಕ್ಕಳ ವಿರುದ್ಧದ online ಅಪರಾಧಗಳು, ಡಿಜಿಟಲ್ ವಂಚನೆಗಳು, ಹಾಗೂ ತಪ್ಪು ಮಾಹಿತಿಗಳ ವಿರುದ್ಧ ಕಾರ್ಯಾಚರಣೆ ನಡೆಸಲಿದೆ.
ಈ ಹಿಂದೆ 2001ರಲ್ಲಿ ದೇಶದ ಮೊದಲ ಸೈಬರ್ ಕ್ರೈಂ ಪೊಲೀಸ್ ಠಾಣೆಯನ್ನು ಸ್ಥಾಪಿಸಿದ ರಾಜ್ಯವೂ ಕರ್ನಾಟಕವೇ. ನಂತರ 2017ರಲ್ಲಿ ಬೆಂಗಳೂರಿನಲ್ಲಿ ಪ್ರತ್ಯೇಕ ಸೈಬರ್ ಅಪರಾಧ ಠಾಣೆ ಸ್ಥಾಪನೆಯಾಯಿತು.
ಈ ಘಟಕಕ್ಕಾಗಿ ಒಟ್ಟು 72 ಕೋಟಿ ರೂಪಾಯಿ ಅನುದಾನ ಕೋರಲಾಗಿತ್ತು. ಪ್ರಸ್ತುತ, ಮೊದಲ ಹಂತದಲ್ಲಿ 5 ಕೋಟಿ ರೂಪಾಯಿಗೆ ಸರ್ಕಾರ ಅನುಮೋದನೆ ನೀಡಿದೆ.
ಸೈಬರ್ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಹೊಸ ಘಟಕವು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವ ನಿರೀಕ್ಷೆ ಇದೆ.