
Bengaluru: ಜಾತಿ ಗಣತಿ ವರದಿ (caste census) ವಿಚಾರವಾಗಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ಒಕ್ಕಲಿಗರಲ್ಲಿ ಬಡವರು ಇಲ್ಲವಾ? ಲಿಂಗಾಯತರಲ್ಲಿ ಬಡವರು ಇಲ್ಲವಾ?” ಎಂದು ಡಿಕೆ ಶಿವಕುಮಾರ್ ಗಂಭೀರ ಧ್ವನಿಯಲ್ಲಿ ಪ್ರಶ್ನಿಸಿದರು. ಕೆಲ ನಿರ್ದಿಷ್ಟ ಜಾತಿಗಳನ್ನು ಮಾತ್ರ ಕೆಟಗರಿ 1ಕ್ಕೆ ಸೇರಿಸಿದ್ದನ್ನು ಅವರು ಪ್ರಶ್ನಿಸಿದರು. ಈ ವೇಳೆ, ಲಿಂಗಾಯತ ಸಮುದಾಯದ ಸಚಿವರು ಕೂಡ ಡಿಕೆಶಿಗೆ ಬೆಂಬಲ ನೀಡಿದರು – “ನಮ್ಮಲ್ಲೂ ಬಡವರು ಇದ್ದಾರೆ, ಎಲ್ಲರೂ ಶ್ರೀಮಂತರೇನಲ್ಲ” ಎಂದರು.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ವರದಿಯಲ್ಲಿ ಲಿಂಗಾಯತ ಸಮುದಾಯದ ಉಪ ಪಂಗಡಗಳನ್ನು ವಿಭಜಿಸಿರುವುದನ್ನು ತಪ್ಪು ಎಂದು ಹೇಳಿದರು. “ಈ ವರದಿಯೇ ಸರಿಯಿಲ್ಲ, ನಾವು ಇದನ್ನು ಒಪ್ಪಲು ಸಾಧ್ಯವಿಲ್ಲ” ಎಂದು ತಿಳಿಸಿದರು. ಸಚಿವ ಈಶ್ವರ ಖಂಡ್ರೆ ಕೂಡ ಲಿಂಗಾಯತ ಸಮುದಾಯದ ಶೇಕಡಾ ಕಡಿಮೆ ತೋರಿಸಲಾಗಿದೆ ಎಂಬ ಆಕ್ಷೇಪವನ್ನೂ ತೋರಿಸಿದರು.
ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಎಲ್ಲಾ ವಿಷಯಗಳನ್ನು ನೋಡಿಕೊಂಡು ತೀರ್ಮಾನಿಸೋಣ, ಮೇ 2ರ ಸಭೆಯಲ್ಲಿ ಮತ್ತೆ ಚರ್ಚಿಸೋಣ ಎಂದು ಹೇಳಿದ್ರು.
ಈ ಸಂದರ್ಭದಲ್ಲಿ, ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವೂ ಪ್ರಸ್ತಾಪವಾಯಿತು. ಸಚಿವ ಶಿವಾನಂದ ಪಾಟೀಲ್ – “2018ರಲ್ಲಿ ಕೈ ಹಾಕಿ ಕೈಸುಟ್ಟುಕೊಂಡಿದ್ದೇವೆ, ಇವಾಗ ಮತ್ತೆ ಅದೇ ಆಗಬಾರದು” ಎಂದರು. ಆದರೆ ಸಚಿವ ಎಂಬಿ ಪಾಟೀಲ್ ಇದಕ್ಕೆ ವಿರೋಧ ವ್ಯಕ್ತಪಡಿಸಿದರು – “ಅದರಿಗು ಇದರಿಗು ಸಂಬಂಧವೇ ಇಲ್ಲ” ಎಂದರು. ಅಂತಿಮವಾಗಿ ಸಿಎಂ ಸಿದ್ದರಾಮಯ್ಯ, ಈಗ ಆ ವಿಷಯಗಳ ಬಗ್ಗೆ ಚರ್ಚೆ ಬೇಡವೆಂದರು.