
Bengaluru: 2024-25ರಲ್ಲಿ ಕರ್ನಾಟಕವು 1331.48 ಮೆಗಾವ್ಯಾಟ್ ಪವನ ವಿದ್ಯುತ್ (wind power) ಉತ್ಪಾದನೆ ಮಾಡಿದ್ದು, ದೇಶದ ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಈ ಸಾಧನೆಯ ನಿಮಿತ್ತ ಬೆಂಗಳೂರಿನಲ್ಲಿ ನಡೆದ ‘ಗ್ಲೋಬಲ್ ವಿಂಡ್ ಡೇ 2025’ ಕಾರ್ಯಕ್ರಮದಲ್ಲಿ, ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಅವರಿಂದ ರಾಜ್ಯ ಇಂಧನ ಸಚಿವ ಕೆ.ಜೆ. ಜಾರ್ಜ್ ಪ್ರಶಸ್ತಿ ಸ್ವೀಕರಿಸಿದರು.
ಇಂದು ರಾಜ್ಯದ ಒಟ್ಟು ಸ್ಥಾಪಿತ ಪವನ ಶಕ್ತಿ ಉತ್ಪಾದನೆ 7,351 ಮೆಗಾವ್ಯಾಟ್ ಆಗಿದ್ದು, ಇದು ಶುದ್ಧ ಇಂಧನ ಕ್ಷೇತ್ರದಲ್ಲಿ ಕರ್ನಾಟಕದ ನಾಯಕತ್ವದ ಸಂಕೇತವಾಗಿದೆ. ತಮಿಳುನಾಡು (1136.37 ಮೆ.ವಾ) ಮತ್ತು ಗುಜರಾತ್ (954.76 ಮೆ.ವಾ) ಕೂಡ ಕರ್ನಾಟಕದ ನಂತರದ ಸ್ಥಾನಗಳಲ್ಲಿ ಇದ್ದವು.
ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡುತ್ತಾ, “ಇದು ಕೇವಲ ಸಂಖ್ಯೆಯಲ್ಲ. ಶುದ್ಧ ಇಂಧನಕ್ಕಾಗಿ ರಾಜ್ಯದ ಬದ್ಧತೆ ಇದರಲ್ಲಿ ಸ್ಪಷ್ಟವಾಗಿದೆ. ನಮ್ಮ ಮುಂದಾಳತ್ವದಿಂದ ರಾಜ್ಯದ ಭವಿಷ್ಯಕ್ಕಾಗಿ ಪವನ ಶಕ್ತಿಯ ಬಲವರ್ಧನೆ ಸಾಧ್ಯವಾಗಿದೆ” ಎಂದು ಹೇಳಿದರು.
ರಾಜ್ಯವು ಈಗಾಗಲೇ 2030ರ ರಾಷ್ಟ್ರೀಯ ಗುರಿಯಾಗಿರುವ 500 ಗಿಗಾವ್ಯಾಟ್ ನವೀಕರಿಸಬಹುದಾದ ಶಕ್ತಿ ಯೋಜನೆಗೆ ಬೆಂಬಲ ನೀಡುತ್ತಿದೆ. ಇದರಲ್ಲಿ 100 ಗಿಗಾವ್ಯಾಟ್ ಪವನ ಶಕ್ತಿಯಿಂದ ಉತ್ಪತ್ತಿಯಾಗಲಿದೆ. ಈಗಾಗಲೇ 12 ಗಿಗಾವ್ಯಾಟ್ ಯೋಜನೆಗಳಿಗೆ ಸಿದ್ಧತೆ ನಡೆದಿದೆ.
ಹೊಸ ಯೋಜನೆಗಳು
- 5 ಗಿಗಾವ್ಯಾಟ್ ಶಕ್ತಿ ಉತ್ಪಾದನೆ ಹೊಂದಿರುವ ನವೀಕರಿಸಬಹುದಾದ ಇಂಧನ ಕ್ಲಸ್ಟರ್
- 20 ಕ್ಕೂ ಹೆಚ್ಚು ಸಬ್ಸ್ಟೇಷನ್ಗಳು
- 400 ಕೆವಿ ವಿದ್ಯುತ್ ಮಾರ್ಗಗಳು
- ನವೀಕರಿಸಬಹುದಾದ ಇಂಧನ ಮೀಸಲು ವಲಯಗಳು
2025ರ ಜಾಗತಿಕ ಹೂಡಿಕೆದಾರರ ಸಭೆಯಲ್ಲಿ, ನಾಳೆಯ ಹಸಿರು ಇಂಧನಕ್ಕಾಗಿ ನಾಲ್ಕು ಲಕ್ಷ ಕೋಟಿ ರೂ. ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದು ಒಟ್ಟು ಹೂಡಿಕೆಯ 40% ಆಗಿದ್ದು, ಜಾಗತಿಕ ಹೂಡಿಕೆದಾರರು ಕರ್ನಾಟಕದ ಮೇಲೆ ವಿಶ್ವಾಸವಿಟ್ಟಿದ್ದಾರೆ.
ಹನುಮಂತನ ಭೂಮಿಯಲ್ಲಿ ಪವನ ದಿನ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳುವಂತೆ, ಹನುಮಂತನ ಜನ್ಮಸ್ಥಳವಲ್ಲವೆಂದು ನಂಬಲಾಗಿರುವ ಹಂಪಿಯಲ್ಲಿ ಪವನ ದಿನ ಆಚರಣೆ ಹೆಚ್ಚು ಅರ್ಥಪೂರ್ಣವಾಗಿದೆ. ಭಾರತವು ಈಗ ವಿಶ್ವದ ನಾಲ್ಕನೇ ಅತಿದೊಡ್ಡ ಪವನ ಶಕ್ತಿ ಉತ್ಪಾದಕ ದೇಶವಾಗಿದೆ (51.5 GW ಸಾಮರ್ಥ್ಯ).
2030ರ ಗುರಿಯನ್ನು ದಿಟ್ಟವಾಗಿ ಕಾಣುತ್ತಿರುವ ಭಾರತ, ಕಡಲಾಚೆಯ 30 GW ಸೇರಿಸಿ ಒಟ್ಟು 100 GW ಪವನ ಶಕ್ತಿಯನ್ನು ಸಾದಿಸುವ ನಿಟ್ಟಿನಲ್ಲಿ ಕ್ರಮವಹಿಸುತ್ತಿದೆ. ಪವನ ಟರ್ಬೈನ್ಗಳ ದೇಶೀಯ ಉತ್ಪಾದನೆ ಹೆಚ್ಚಿಸಲು ಯೋಜನೆಗಳು ರೂಪುಗೊಂಡಿವೆ.
ಪರಿಷ್ಕಾರ ಮತ್ತು ಭವಿಷ್ಯದ ಗುರಿ: ಪ್ರಹ್ಲಾದ್ ಜೋಶಿ ಅವರು ಪವನ, ಸೌರ ಮತ್ತು ಶೇಖರಣಾ ವ್ಯವಸ್ಥೆಗಳ ಏಕೀಕರಣದ ಮೂಲಕ 24 ಗಂಟೆಯ ವಿದ್ಯುತ್ ನೀಡುವುದು ಮುಂದಿನ ಮುಖ್ಯ ಗುರಿಯಾಗಿರುತ್ತದೆ ಎಂದರು. ಪವನ ಟರ್ಬೈನ್ ಉತ್ಪಾದನೆಯಲ್ಲಿ ಭಾರತ ಮತ್ತಷ್ಟು ಸ್ವಾವಲಂಬಿಯಾಗಬೇಕೆಂಬ ಧ್ಯೇಯವನ್ನು ಹೊಂದಿದೆ.
ರಾಜ್ಯದ ಹೆಮ್ಮೆ: ಕರ್ನಾಟಕದ ಸ್ಥಾಪಿತ ಶಕ್ತಿ ಸಾಮರ್ಥ್ಯವು ಈಗ ದಕ್ಷಿಣ ಆಫ್ರಿಕಾ, ಪೋರ್ಚುಗಲ್, ನ್ಯೂಜಿಲೆಂಡ್ಗಳ ಒಟ್ಟೂ ಶಕ್ತಿಯನ್ನು ಮೀರಿದ್ದು, ಇದರಿಂದ ರಾಜ್ಯದ ಶಕ್ತಿಯ ಸ್ಥಿತಿ ಸ್ಪಷ್ಟವಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ತಿಳಿಸಿದ್ದಾರೆ.