Mysuru: ಹೆಚ್.ಡಿ.ಕೋಟೆ (H.D Kote) ಪಟ್ಟಣದ ಬಳಿಯ ಡ್ರೈವರ್ ಕಾಲೋನಿ ಸಮೀಪ 7 ವರ್ಷದ ಗಂಡು ಚಿರತೆಯೊಂದು ಅರಣ್ಯ ಇಲಾಖೆ (Forest department) ಇರಿಸಿದ್ದ ಬೋನಿಗೆ ಬಿದ್ದಿದೆ. ಒಂದೇ ವಾರದಲ್ಲಿ ಒಂದೇ ಜಾಗದಲ್ಲಿ 3 ಚಿರತೆ (Leopard) ಸೆರೆಸಿಕ್ಕಿರುವುದರಿಂದ, ಸುತ್ತಮುತ್ತಲ ಗ್ರಾಮಸ್ಥರು, ರೈತರು ಕಾಡು ಪ್ರಾಣಿಗಳ ದಾಳಿಯ ಆತಂಕಕ್ಕೆ ಒಳಗಾಗಿದ್ದಾರೆ.
ರೈತ ರಾಮಕೃಷ್ಣ ಅವರ ಜಮೀನಿನಲ್ಲಿ ಕೋಟೆ ವಲಯ ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಒಂದು ವಾರದ ಹಿಂದೆ ರೈತ ಗುಂಡು ಮಲ್ಲು ಅವರ ಜಮೀನಿನಲ್ಲಿ 2 ಚಿರತೆಗಳು ಸೆರೆಸಿಕ್ಕಿದ್ದವು.
5 ವರ್ಷದ ಗಂಡು ಚಿರತೆ ಬೋನಿಗೆ ಬಿದ್ದ ಮೂರೇ ದಿನದಲ್ಲಿ ಮತ್ತೊಂದು ಚಿರತೆ ಬೋನಿಗೆ ಬಿದ್ದಿತ್ತು. ಇದೀಗ ಏಳು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಪ್ರದೇಶದಲ್ಲಿ ಇನ್ನಷ್ಟು ಕಾಡುಪ್ರಾಣಿಗಳಿರುವ ಸಾಧ್ಯತೆಯಿದ್ದು ಜನರ ಮೇಲೆ ದಾಳಿ ಮಾಡಿದರೆ ಎಂಬುದು ಸ್ಥಳೀಯರ ಆತಂಕವಾಗಿದೆ.