
ಹಾವೇರಿ: ಕಾಮನಹಳ್ಳಿ ಗ್ರಾಮದ ರೈತ ಮುತ್ತಣ್ಣ ಭೀರಪ್ಪ ಪೂಜಾರ ಅವರು ತಮ್ಮ ವಿಶಿಷ್ಟ ಕೃಷಿ ವಿಧಾನಗಳಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (Doctorate) ಪದವಿಯನ್ನು ಪಡೆದುಕೊಂಡಿದ್ದಾರೆ. ಈ ಸಾಧನೆಯ ಹಿಂದೆ ಮುತ್ತಣ್ಣನ ಹಲವಾರು ವರ್ಷಗಳ ಪರಿಶ್ರಮ ಹಾಗೂ ವೈವಿಧ್ಯಮಯ ಕೃಷಿ ಪ್ರಯೋಗಗಳಿಗಿದೆ.
ಬಡ ಕುಟುಂಬದ ಮಗನಾಗಿ ಹುಟ್ಟಿದ ಮುತ್ತಣ್ಣ, ಶಾಲೆಗೂ ಹೋಗದೆ, “ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು” ಎಂಬ ಮಾತು ಸಾಬೀತುಪಡಿಸಿದ್ದಾರೆ. ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಧರ್ಮಸ್ಥಳ ಕೃಷಿ ಮೇಳ ಸೇರಿದಂತೆ ಅನೇಕ ಪ್ರಶಸ್ತಿಗಳು ದೊರೆತಿವೆ.
ಬೆಳಗಾವಿಯ ನವಿಲಾಳ ಗ್ರಾಮದವರು ಆದ ಮುತ್ತಣ್ಣ, ಹಾವೇರಿಗೆ ವಲಸೆ ಬಂದ ಮೇಲೆ ತನ್ನ ಪಾಲಿನ 10 ಎಕರೆ ಬರಿದಾಗಿದ್ದ ಜಮೀನಿನಲ್ಲಿ ಕೃಷಿ ಆರಂಭಿಸಿದರು. ಪ್ರಾರಂಭದಲ್ಲಿ ಅಪಹಾಸ್ಯ ಎದುರಾದರೂ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ನೆರವಿನಿಂದ ಕೃಷಿಯಲ್ಲಿ ಯಶಸ್ಸು ಕಂಡರು.
ಈಗ ಮುತ್ತಣ್ಣ 37 ಎಕರೆ ಜಮೀನಿನ ಮಾಲೀಕರು. ಅಲ್ಲಿ ತೆಂಗು, ಬಾಳೆ, ಅಡಿಕೆ, ಮಾವು, ಸಪೋಟ ಸೇರಿದಂತೆ ಹಲವಾರು ಬೆಳೆಗಳನ್ನು ಬೆಳೆಸುತ್ತಿದ್ದಾರೆ. ಜೇನು ಸಾಕಣೆ, ಹೈನುಗಾರಿಕೆ, ಮೀನುಗಾರಿಕೆ, ಸಾವಯವ ಕೃಷಿ ಕೂಡ ಇವರು ಮಾಡುತ್ತಿದ್ದಾರೆ.
ಪ್ರತಿ ವರ್ಷ ಲಕ್ಷಾಂತರ ಅಡಿಕೆ ಸಸಿಗಳನ್ನು ಮಾರಾಟ ಮಾಡುತ್ತಾ, ಈ ಬಾರಿ ಮಾವು, ತೆಂಗು ಸಸಿಗಳನ್ನೂ ಸೇರಿಸಿ ಮಾರಾಟ ಮಾಡಿದ್ದಾರೆ. 24 ಬಗೆಯ ದೇಶಿ ಭತ್ತ ಬೆಳೆದು, ಎಕರೆಗೆ 48 ಕ್ವಿಂಟಾಲ್ ಉತ್ಪಾದನೆ ಸಾಧಿಸಿದ್ದಾರೆ.
ತೋಟದ ಗಿಡಮರಗಳಿಗೆ ರಾತ್ರಿ ಶಬ್ದ ಇಲ್ಲದ ಈ ಸಮಯದಲ್ಲಿ ಶಾಸ್ತ್ರೀಯ ಸಂಗೀತ, ವೈವಿಧ್ಯಮಯ ಸಂಗೀತೋಪಕರಣಗಳ ಧ್ವನಿಸುರುಳಿ ಹಾಕುವ ಮೂಲಕ ಹಾಡು ಕೇಳಿಸುತ್ತೇನೆ. ಇದಕ್ಕೆ ಗಿಡ-ಮರಗಳು ಸ್ಪಂದಿಸುತ್ತವೆ. ಹೆಚ್ಚು ಇಳುವರಿ ನೀಡುತ್ತವೆ. ಸಂಗೀತಕ್ಕೆ ಆ ಶಕ್ತಿ ಇದೆ” ಎನ್ನುತ್ತಾರೆ ಮುತ್ತಣ್ಣ.
ಮುತ್ತಣ್ಣನ ತೋಟಕ್ಕೆ ಹೊರರಾಜ್ಯ ಹಾಗೂ ವಿದೇಶಗಳಿಂದ ರೈತರು ಬಂದು ಅವರ ಹೊಸ ಕೃಷಿ ಪ್ರಯೋಗಗಳನ್ನು ನೋಡುತ್ತಿದ್ದಾರೆ. ಗೌರವ ಡಾಕ್ಟರೇಟ್ ಪಡೆದ ಮುತ್ತಣ್ಣ, ಈ ಯಶಸ್ಸು ತಮ್ಮ ಪೋಷಕರು, ಅಧಿಕಾರಿಗಳು ಹಾಗೂ ಸಹ ರೈತರಿಗೆ ಸೇರಿದೆ ಎಂದಿದ್ದಾರೆ.
ಮುತ್ತಣ್ಣ ಪೂಜಾರರ ಸಾಹಸ, ಪರಿಶ್ರಮ ಮತ್ತು ಕೃಷಿಯ ನವೀನ ಪ್ರಯೋಗಗಳು ಅವರು ಗೌರವ ಡಾಕ್ಟರೇಟ್ ಗೆ ಪಾತ್ರರಾಗುವಂತೆ ಮಾಡಿವೆ. ಇವರು ಇಂದಿನ ಯುವ ರೈತರಿಗೆ ಆದರ್ಶ.