
Shivamogga: RCB ವಿಜಯೋತ್ಸವದಲ್ಲಿ ಭಾಗವಹಿಸಲು ಹೋಗಿ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬದ ಭಾವನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲುಪಿಸಲು ಬಹಿರಂಗ ಪತ್ರ ಬರೆದಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಈ ಪತ್ರವನ್ನು ನಾನು ಸಿಎಂಗೆ ಯಾವುದೇ ರಾಜಕೀಯ ಲಾಭಕ್ಕಾಗಿ ಅಥವಾ ಅವರ ತೇಜೋವಧೆಗಾಗಿ ಬರೆಯಲಿಲ್ಲ. ರಾಜ್ಯ ಮತ್ತು ರಾಷ್ಟ್ರದ ಜನರ ಭಾವನೆಗಳನ್ನು ನಾಡಿನ ದೊರೆಗೆ ತಲುಪಿಸಲು ಪತ್ರ ಬರೆದಿದ್ದೇನೆ. ಮೃತರ ಕುಟುಂಬದ ನೋವು ಸರ್ಕಾರದ ಗಮನಕ್ಕೆ ಬರಬೇಕು ಎಂಬ ಆಶಯವಿದೆ” ಎಂದು ವಿವರಿಸಿದರು.
“ಈ ಪತ್ರದ ನಂತರ ಕೂಡ ಸಿಎಂ ಸ್ಪಂದನೆ ಕೊಡುತ್ತಾರೆ ಎಂಬ ವಿಶ್ವಾಸ ನನಗೆ ಇಲ್ಲ. ಅವರು ದಪ್ಪ ಚರ್ಮದವರು. ಅಧಿಕಾರದ ಲಾಲಸೆಯಲ್ಲಿರುವ ಈ ಸರ್ಕಾರ ಜನಭಾವನೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಈಗ ಅವರಿಬ್ಬರನ್ನೂ ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಕರೆಯಲಾಗಿದೆ. ಆದರೆ ಅವರ ರಾಜೀನಾಮೆ ಆಗಲಿದೆ ಎಂಬ ಭರವಸೆ ನನಗೆ ಇಲ್ಲ” ಎಂದವರು ಹೇಳಿದ್ದಾರೆ.
“ಜನವಿರೋಧಿ ರಾಜ್ಯ ಸರ್ಕಾರದ ವಿರುದ್ಧ ಜೂನ್ 13ರಂದು ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಿದ್ದೇವೆ. 10 ರಿಂದ 13 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಮೃತರ ಕುಟುಂಬಸ್ಥರೂ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದೇ ದಿನ ಸಿಎಂ ಮನೆಗೆ ಮುತ್ತಿಗೆ ಹಾಕಲಾಗುತ್ತದೆ. ಜೂನ್ 16ರಂದು ಹೋರಾಟದ ಎರಡನೇ ಹಂತ ನಡೆಯಲಿದೆ” ಎಂದಿದ್ದಾರೆ.
“ಕಾಲ್ತುಳಿತದ ಘಟನೆಗೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ಕ್ರಮವಾಗಿ ಎ1, ಎ2, ಎ3 ಆರೋಪಿಗಳಾಗಿದ್ದಾರೆ. ಹಾಲಿ ನ್ಯಾಯಾಧೀಶರಿಂದಲೇ ತನಿಖೆ ನಡೆಯಬೇಕು ಎಂಬುದು ನಮ್ಮ ಸ್ಪಷ್ಟ ಬೇಡಿಕೆ. ನಿವೃತ್ತ ನ್ಯಾಯಾಧೀಶರನ್ನು ನೇಮಿಸಿ ತನಿಖೆ ನಡೆಸುವುದು ಸತ್ಯದ ಮುಖ ಮುಚ್ಚುವ ಪ್ರಯತ್ನವಾಗಿದೆ” ಎಂದು ವಿಜಯೇಂದ್ರ ಆಕ್ಷೇಪಿಸಿದರು.