New Delhi: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಗಡಿ ನಿಯಂತ್ರಣ ರೇಖೆಯ (LoC) ಕುಪ್ವಾರಾ ಮತ್ತು ಪೂಂಚ್ ವಲಯಗಳಲ್ಲಿ ಪಾಕಿಸ್ತಾನ (Pakistan) ಸೈನಿಕರು ಸತತ ನಾಲ್ಕನೇ ದಿನವೂ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಏಪ್ರಿಲ್ 27-28ರ ರಾತ್ರಿ ಪಾಕಿಸ್ತಾನ ಸೇನೆ ಸಣ್ಣ ಶಸ್ತ್ರಾಸ್ತ್ರಗಳಿಂದ ಹಲ್ಲೆ ನಡೆಸಿದ ಬಳಿಕ, ಭಾರತೀಯ ಸೇನೆ ಕೂಡ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ತಿಳಿಸಲಾಗಿದೆ. ಪೂಂಚ್ ವಲಯದಲ್ಲಿ ಈ ಮೊದಲು ಕದನ ವಿರಾಮ ಉಲ್ಲಂಘನೆ ಇಲ್ಲದಿದ್ದು, ಈ ಬಾರಿ ಹಲ್ಲೆ ನಡೆದಿದ್ದು ವಿಶೇಷ. ಕಳೆದ ಮಂಗಳವಾರ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವಿಗೀಡಾದ ನಂತರ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.
ಪಹಲ್ಗಾಮ್ ದಾಳಿಯ ನಂತರ ಭಾರತೀಯ ಭದ್ರತಾ ಪಡೆಗಳು ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿವೆ. ಕುಲ್ಗಾಮ್ ಜಿಲ್ಲೆಯ ಮಟಲ್ಹಾಮಾ ಚೌಕ್ ಥೋಕರ್ಪೋರಾ ಬಳಿ ಚೆಕ್ಪಾಯಿಂಟ್ನಲ್ಲಿ ಪೊಲೀಸರು, ಸೇನೆ ಮತ್ತು CRPS ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಇಬ್ಬರು ಭಯೋತ್ಪಾದಕ ಸಹಚರರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಎರಡು ಪಿಸ್ತೂಲ್, ಎರಡು ಮ್ಯಾಗಜೀನುಗಳು ಮತ್ತು 25 ಸುತ್ತು ಪಿಸ್ತೂಲ್ ಮದ್ದುಗುಂಡುಗಳು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಹಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡಿದೆ. ಪಾಕಿಸ್ತಾನಿ ನಾಗರಿಕರನ್ನು ವಾಪಸ್ ಕಳುಹಿಸುವುದು, ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸುವುದು ಮತ್ತು ಅಟ್ಟಾರಿ ಭೂ ಸಾರಿಗೆ ಪೋಸ್ಟ್ ಮುಚ್ಚುವುದು ಮುಂತಾದ ಕ್ರಮಗಳು ಇದರಲ್ಲಿ ಸೇರಿವೆ.