ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳಲ್ಲಿ ರಾಜ್ಯ ಸರ್ಕಾರದ ಕೋಟಾದಡಿ ಸ್ಥಳೀಯ ಮೀಸಲಾತಿ ಒದಗಿಸುವುದು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ (Supreme Court) ತೀರ್ಪು ನೀಡಿದೆ. ಇದು ಭಾರತದ ಸಂವಿಧಾನದ 14ನೇ ವಿಧಿಯ ಅಡಿಯಲ್ಲಿ ಸಮಾನತೆ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಸುಧಾಂಶು ಧುಲಿಯಾ ಮತ್ತು ಎಸ್.ವಿ.ಎನ್. ಭಟ್ಟಿ ಅವರಿದ್ದ ಪೀಠ, ಪ್ರವೇಶಾತಿಯನ್ನು ಕಡ್ಡಾಯವಾಗಿ ಅರ್ಹತೆಯ ಆಧಾರದ ಮೇಲೆ ನೀಡಬೇಕು ಎಂದು ತಿಳಿಸಿದೆ.
ನ್ಯಾಯಾಲಯದ ಅಭಿಪ್ರಾಯ
- ಭಾರತದಲ್ಲಿ ಎಲ್ಲರೂ ಸಮಾನರು; ಪ್ರಾಂತೀಯತೆ ಅಥವಾ ಸ್ಥಳೀಯತೆ ಆಧಾರದ ಮೇಲೆ ಮೀಸಲಾತಿ ನೀಡಲು ಸಾಧ್ಯವಿಲ್ಲ.
- ಕೆಲವು ಸಂದರ್ಭಗಳಲ್ಲಿ ಮಾತ್ರ ಎಂಬಿಬಿಎಸ್ ಕೋರ್ಸ್ ಗಳಿಗಾಗಿ ಸ್ಥಳೀಯ ಮೀಸಲಾತಿ ನೀಡಬಹುದು.
- ಉನ್ನತ ಶಿಕ್ಷಣ ಮಟ್ಟದಲ್ಲಿ ಸ್ಥಳೀಯ ಮೀಸಲಾತಿ ನೀಡುವುದು 14ನೇ ವಿಧಿಯ ಉಲ್ಲಂಘನೆಯಾಗುತ್ತದೆ.
ಆದರೆ, ಈ ತೀರ್ಪು ಈಗಾಗಲೇ ನೀಡಿರುವ ಸ್ಥಳೀಯ ಮೀಸಲಾತಿ ಮೇಲಾದ ಪರಿಣಾಮ ಬೀರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ತೀರ್ಪು 2019ರಲ್ಲಿ ದ್ವಿಸದಸ್ಯ ಪೀಠ ನೀಡಿದ ತೀರ್ಪಿನ ಉಲ್ಲೇಖದ ಮೇಲೆ ಆಧಾರಿತವಾಗಿದೆ. ಚಂಡೀಗಢದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸ್ನಾತಕೋತ್ತರ ಕೋರ್ಸ್ಗಳ ಪ್ರವೇಶಕ್ಕೆ ಸಂಬಂಧಿಸಿದ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆಯ ವೇಳೆ ಈ ವಿಷಯ ಚರ್ಚೆಯಾಯಿತು.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಚಂಡೀಗಢ ಕೇಂದ್ರಾಡಳಿತ ಪ್ರದೇಶ ಸರ್ಕಾರದ ಸ್ಥಳೀಯ ಮೀಸಲಾತಿ ನಿಯಮಗಳನ್ನು ಅಮಾನ್ಯವೆಂದು ಘೋಷಿಸಿತ್ತು, ಇದನ್ನೇ ಸುಪ್ರೀಂ ಕೋರ್ಟ್ ಸಮರ್ಥಿಸಿಕೊಂಡಿದೆ.