Bengaluru: ಮುಖ್ಯಮಂತ್ರಿಯಾಗಿ ಸಲಹೆಗಾರರ ಹುದ್ದೆಗೆ ಅಳಂದ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ (MLA B.R. Patil) ರಾಜೀನಾಮೆ ನೀಡಿರುವುದರಿಂದ ರಾಜ್ಯ ರಾಜಕೀಯದಲ್ಲಿ ಹೊಸ ಬೆಳವಣಿಗೆಯ ಮುನ್ಸೂಚನೆ ಕಂಡುಬಂದಿದೆ.
ಬಿ.ಆರ್.ಪಾಟೀಲ್, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಳೆಯ ಸ್ನೇಹಿತರು ಹಾಗೂ ಪರಮಾಪ್ತರಲ್ಲಿ ಒಬ್ಬರು. ಅವರು ಸಚಿವ ಸ್ಥಾನಕ್ಕೆ ಹಂಬಲಿಸುತ್ತಿದ್ದಾಗ, ಪ್ರಿಯಾಂಕ ಖರ್ಗೆ ಮತ್ತು ಶರಣಪ್ರಕಾಶ್ ಪಾಟೀಲ್ ಅವರು ಕಲಬುರಗಿ ಜಿಲ್ಲೆಯಿಂದ ಅಡ್ಡಿಯಾಗಿದ್ದರು.
ಈ ಹಿನ್ನೆಲೆಯಲ್ಲಿ ಬಿ.ಆರ್.ಪಾಟೀಲ್ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಾ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದರು. ಇದೇ ರೀತಿಯಲ್ಲಿ, ಕಾಂಗ್ರೆಸ್ನಲ್ಲಿ ಬಸವರಾಜರಾಯ ರೆಡ್ಡಿ ಸಹ ಹಲವಾರು ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸಿದ್ದರು.
ಈ ಇಬ್ಬರನ್ನು ಸಮಾಧಾನಪಡಿಸಲು, ಸಿಎಂ ಸಿದ್ದರಾಮಯ್ಯ ಅವರು ಬಸವರಾಜರಾಯ ರೆಡ್ಡಿಯನ್ನು ಆರ್ಥಿಕ ಸಲಹೆಗಾರನಾಗಿ, ಬಿ.ಆರ್.ಪಾಟೀಲ್ ಅವರನ್ನು ಮುಖ್ಯಮಂತ್ರಿಗಳ ಸಲಹೆಗಾರನಾಗಿ ನೇಮಿಸಿ ಸಂಪುಟ ದರ್ಜೆಯ ಸ್ಥಾನಮಾನ ನೀಡಿದ್ದರು. ಆದರೆ, ಬಿ.ಆರ್.ಪಾಟೀಲ್ ರಾಜ್ಯ ಮತ್ತು ಜಿಲ್ಲಾ ರಾಜಕಾರಣದಿಂದ ಬೇಸತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.