Delhi: ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಪುಣ್ಯತಿಥಿಯ ದಿನವೇ, ಜಾರಿ ನಿರ್ದೇಶನಾಲಯ (ED) ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ದೊಡ್ಡ ಆಘಾತ ನೀಡಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ (National Herald case) ಇಬ್ಬರು 142 ಕೋಟಿ ರೂಪಾಯಿ ಮೌಲ್ಯದ ಹಣವನ್ನು ಅಕ್ರಮವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಇಡಿಯಿಂದ ಹೊರಬಿದ್ದಿದೆ.
ಈ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಮತ್ತು ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆಯ ಪ್ರಕರಣ ದಾಖಲಾಗಿದ್ದು, ಅವರು ಈ ಹಣದ ಲಾಭ ಪಡೆದಿದ್ದಾರೆ ಎಂದು ಇಡಿ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ.
ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ವಿ ರಾಜು ಅವರು, ನ್ಯಾಷನಲ್ ಹೆರಾಲ್ಡ್ಗೆ ಸಂಬಂಧಿಸಿದ ಆಸ್ತಿಗಳನ್ನು 2023ರ ನವೆಂಬರ್ನಲ್ಲಿ ಮುಟ್ಟುಗೋಲು ಹಾಕಲಾಗಿದೆ ಎಂದರು. ಅವರು ಅದರ ಮೊದಲು ಆ ಆಸ್ತಿಯಿಂದ ಲಾಭ ಪಡೆಯುತ್ತಿದ್ದರಂತೆ.
ಇಂದು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಿತು. ಜೂನ್ 26, 2014ರಂದು ಸುಬ್ರಮಣಿಯನ್ ಸ್ವಾಮಿ ಖಾಸಗಿ ದೂರು ಸಲ್ಲಿಸಿದ ನಂತರ, ಇಡಿ 2021ರಲ್ಲಿ ತನಿಖೆ ಆರಂಭಿಸಿತು. ಇತ್ತೀಚೆಗೆ ಇಡಿ ತನ್ನ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ: ನ್ಯಾಷನಲ್ ಹೆರಾಲ್ಡ್ ಎಂಬ ಪತ್ರಿಕೆಯನ್ನು 1938ರಲ್ಲಿ ಜವಾಹರಲಾಲ್ ನೆಹರು ಅವರು ಪ್ರಾರಂಭಿಸಿದ್ದರು. ಈ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಹೆಸರಿನಲ್ಲಿ ನಡೆಸಲಾಗುತ್ತಿತ್ತು. ಇದು ಸ್ವಾತಂತ್ರ್ಯ ಹೋರಾಟಗಾರರ ಸಂಸ್ಥೆಯಾಗಿತ್ತು.
ಆದರೆ 2010ರ ಬಳಿಕ AJL ನಷ್ಟ ಅನುಭವಿಸುತ್ತಿದ್ದರಿಂದ, 2011ರಲ್ಲಿ ಅದರ ಹಕ್ಕುಗಳು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ (YIL) ಗೆ ವರ್ಗಾಯಿಸಲಾಯಿತು. ಈ ಕಂಪನಿಯ ನಿರ್ದೇಶಕರಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿಯರು ಇದ್ದರು. ಈ ಹಕ್ಕು ವರ್ಗದಲ್ಲಿ ವಂಚನೆ ನಡೆದಿದೆ ಎಂದು ಆರೋಪವಿದೆ.
2012ರಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ದೂರು ನೀಡಿದ್ದರು. ಯಂಗ್ ಇಂಡಿಯನ್ ಸಂಸ್ಥೆ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಆಸ್ತಿಯನ್ನು ದುರುಪಯೋಗಪಡಿಸಿಕೊಂಡಿದೆ ಎಂಬ ಆರೋಪ ಅವರು ಮಾಡಿದ್ದರು.