Bengaluru: ಆರ್ಮಿ ಕ್ಯಾಂಟೀನ್ ಗೆ (army canteen) ಪೂರೈಕೆ ಮಾಡುವ ಮದ್ಯದ ಮೇಲಿನ ಅಬಕಾರಿ ತೆರಿಗೆ ಹೆಚ್ಚಿಸಲಾಗುವುದು ಎಂಬ ಮಾಧ್ಯಮ ವರದಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಳ್ಳಿಹಾಕಿದ್ದಾರೆ. ಬೆಂಗಳೂರಿನಲ್ಲಿ ನಡೆದ ‘ಜೈ ಹಿಂದ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಮಿ ಕ್ಯಾಂಟೀನ್ಗಳಿಗೆ ಯಾವುದೇ ಅಬಕಾರಿ ಸುಂಕ ವಿಧಿಸಲ್ಲ ಎಂದು ಸ್ಪಷ್ಟಪಡಿಸಿದರು.
ಮಾಧ್ಯಮಗಳಲ್ಲಿ ಮಿಲಿಟರಿ ಕ್ಯಾಂಟೀನ್ ಗೆ ತೆರಿಗೆ ವಿಧಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದ್ದರೂ, ಸರ್ಕಾರ ಈ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸಿಎಂ ಹೇಳಿದರು. ಈ ಘೋಷಣೆಗೆ ಸಭೆಯಲ್ಲಿ ಉಪಸ್ಥಿತರಿದ್ದವರು ಚಪ್ಪಾಳೆ ಮೂಲಕ ಸ್ಪಂದಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿವೃತ್ತ ಸೈನಿಕರ ಹಿತಾಸಕ್ತಿಗಾಗಿ ‘ಎಕ್ಸ್ ಸರ್ವಿಸ್ ಮೆನ್ ವೆಲ್ಫೇರ್ ಕಾರ್ಪೊರೇಷನ್’ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಭರವಸೆ ನೀಡಿದರು. “ನೀವೆಲ್ಲಾ ದೇಶದ ರಕ್ಷಣೆಯಲ್ಲಿ ಇದ್ದಿರಿ, ಈಗ ನಾವು ನಿಮ್ಮೊಂದಿಗೆ ಇದ್ದೇವೆ,” ಎಂದು ಅವರು ನಿವೃತ್ತ ಸೇನಾ ಸಿಬ್ಬಂದಿಗೆ ಅಭಿಮಾನದಿಂದ ಹೇಳಿದರು.
ಇತ್ತೀಚೆಗಿನ ದಿನಗಳಲ್ಲಿ, ರಾಜ್ಯ ಸರ್ಕಾರ ಮದ್ಯದ ದರವನ್ನು ಮೂರ್ರು ಬಾರಿ ಹೆಚ್ಚಿಸಿದ್ದು, ಆರ್ಮಿ ಕ್ಯಾಂಟೀನಿಗೂ ತೆರಿಗೆ ವಿಧಿಸಲಾಗಬಹುದು ಎಂಬ ಮಾತುಗಳು ಹರಡಿದ್ದವು. ಇದರ ಬಗ್ಗೆ ವ್ಯಕ್ತವಾದ ಗೊಂದಲಕ್ಕೆ ಇದೀಗ ಸಿಎಂ ಸ್ಪಷ್ಟನೆ ನೀಡಿರುವುದು ಸ್ಪಷ್ಟತೆ ತಂದಿದೆ.