Bengaluru: ವಿದೇಶಗಳಿಂದ ಬಂದ ಪ್ರಯಾಣಿಕರ ಬಳಿ 3,000ಕ್ಕೂ ಹೆಚ್ಚು ಆಮೆ ಮತ್ತು ಉಡಗಳು ಪತ್ತೆಯಾಗಿರುವ ವಿಚಿತ್ರ ಘಟನೆ ಒಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Bengaluru airport) ನಡೆದಿದೆ. ಅಧಿಕಾರಿಗಳು ಈ ಎಲ್ಲಾ ಪ್ರಾಣಿಗಳನ್ನು ವಶಪಡಿಸಿಕೊಂಡಿದ್ದು, ಶಂಕಿತ ಕಳ್ಳಸಾಗಣೆದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಥಾಯ್ಲೆಂಡಿನಿಂದ ಬಂದ ಬಾಲಸುಬ್ರಮಣಿಯನ್ ಷಣ್ಮುಗಂ, ವಿಜಯರಾಘವನ್ ಧನಪಾಲ್ ಮತ್ತು ಮಲೇಷ್ಯಾದಿಂದ ಬಂದ ಅರುಣ್ಕುಮಾರ್ ನಾರಾಯಣಸ್ವಾಮಿ ಎಂಬವರ ಬಳಿ ಆಮೆ, ಉಡ ಹಾಗೂ ಆಫ್ರಿಕನ್ ಆಮೆಗಳನ್ನು ವಶಪಡಿಸಲಾಗಿದೆ. ಇವರ ಬಳಿ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಈ ಪ್ರಾಣಿಗಳನ್ನು ಭಾರತಕ್ಕೆ ತರಲಾಗಿತ್ತು.
ಈ ಪ್ರಾಣಿಗಳನ್ನು ವಾಪಸ್ ಅವರ ಮೂಲ ದೇಶಗಳಿಗೆ ಕಳುಹಿಸಲಾಗಿದೆ. ಶಂಕಿತರ ವಿಚಾರಣೆ ಮುಂದುವರಿದಿದೆ.
ಇದಕ್ಕೆ ಸಂಬಂಧಿಸಿದಂತೆ, ಕಳೆದ ಎರಡು ತಿಂಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂತಹ ವನ್ಯಜೀವಿ ಕಳ್ಳಸಾಗಣೆ ಪ್ರಕರಣಗಳು ಹೆಚ್ಚಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಳ್ಳಸಾಗಣೆದಾರರು ಮರಿ ಪ್ರಾಣಿಗಳಿಗೆ ನಿದ್ರೆಗೊಳಿಸುವ ಔಷಧ ನೀಡಿ ಸುಲಭವಾಗಿ ಸಾಗಿಸುತ್ತಿದ್ದಾರೆ ಎನ್ನಲಾಗಿದೆ.
ಮಲೇಷ್ಯಾದಿಂದ ತರಲಾಗುವ ಕೆಂಪು ಕಿವಿಯ ಆಮೆಗಳು ಹೆಚ್ಚು ಕಳ್ಳಸಾಗಣೆಗೊಳ್ಳುವ ಪ್ರಬೇಧಗಳಲ್ಲಿ ಒಂದಾಗಿವೆ. ಇತ್ತೀಚೆಗಷ್ಟೆ 3,000 ಆಮೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಾಣಿಗಳು ಅಳಿವಿನಂಚಿನಲ್ಲಿರುವವೆಯಾದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರಕ್ಷಿಸಲ್ಪಟ್ಟಿಲ್ಲ. ಆದರೆ, ಭಾರತೀಯ ವನ್ಯಜೀವಿ ಕಾಯ್ದೆ 1972 ಪ್ರಕಾರ ಇವು ‘‘ಶೆಡ್ಯೂಲ್ IV’’ ಪ್ರಾಣಿಗಳಾಗಿ ಪರಿಗಣಿಸಲಾಗಿದ್ದು, ಪರವಾನಗಿ ಇಲ್ಲದೇ ಸಾಗಿಸುವುದು ಕಾನೂನುಬದ್ಧವಲ್ಲ.