ರಾಮನಗರದ ಶಾನ್ವಿ ಸತೀಶ್ ಮಲೇಷ್ಯಾದ ಪ್ಯಾನಸೋನಿಕ್ ಕ್ರೀಡಾ ಕಾಂಪ್ಲೆಕ್ಸ್ನಲ್ಲಿ ನಡೆದ ಅಂತರಾಷ್ಟ್ರೀಯ ಟೇಕ್ವಾಂಡೋ (international taekwondo) ಸ್ಪರ್ಧೆಯಲ್ಲಿ 1 ಚಿನ್ನ, 1 ಬೆಳ್ಳಿ ಮತ್ತು 1 ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಅವರು ಭಾರತಕ್ಕೆ ಗೌರವ ತಂದಿದ್ದಾರೆ.
ಮೇ 1ರಿಂದ ನಾಲ್ಕು ದಿನ ನಡೆದ ಈ ಸ್ಪರ್ಧೆಯಲ್ಲಿ ಶಾನ್ವಿ 7-8 ವರ್ಷದ ವಯೋಮಾನದ 23 ಹಾಗೂ 27 ಕೆ.ಜಿ ತೂಕದ ವಿಭಾಗಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅವರು ಸ್ಪಾರಿಂಗ್ ವಿಭಾಗದಲ್ಲಿ ಚಿನ್ನ, ಪ್ಯಾಟರ್ನ್ ವಿಭಾಗದಲ್ಲಿ ಬೆಳ್ಳಿ ಹಾಗೂ ವಾರಿಯರ್ ಸ್ಪಾರಿಂಗ್ನಲ್ಲಿ ಕಂಚು ಪದಕ ಗಳಿಸಿದರು.
ಈ ಸ್ಪರ್ಧೆಯಲ್ಲಿ ಭಾರತ, ಇಂಡೋನೇಷ್ಯಾ, ಬಾಂಗ್ಲಾದೇಶ, ಮಯನ್ಮಾರ್, ಸಿರಿಯಾ ಮತ್ತು ಮಲೇಷ್ಯಾ ಸೇರಿ 1,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಭಾರತದಿಂದ 65 ಮಂದಿ ಸ್ಪರ್ಧಿಸಿದರು, ಶಾನ್ವಿಯೂ ಅವರಲ್ಲಿ ಒಬ್ಬರು.
ಇದಕ್ಕೂ ಮೊದಲು ಶಾನ್ವಿ ದುಬೈ ಮತ್ತು ಉಜ್ಬೇಕಿಸ್ತಾನ್ ಸೇರಿದಂತೆ ಏಷ್ಯನ್ ಚಾಂಪಿಯನ್ಶಿಪ್ಗಳಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದ ಅನುಭವವಿದೆ. ಮಲೇಷ್ಯಾ ಸ್ಪರ್ಧಾಳುವಿನೊಂದಿಗೆ ನಡೆದ ಕಠಿಣ ಅಂತಿಮ ಪಂದ್ಯದಲ್ಲಿ ಶಾನ್ವಿ ಉತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಪಡೆದರು.
ಶಾನ್ವಿ ರಾಮನಗರದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸತೀಶ್ ಮತ್ತು ಚೈತ್ರಾ ದಂಪತಿಯ ಮಗಳು. ತರಬೇತುದಾರರಾದ ಪ್ರದೀಪ್ ಮತ್ತು ಬಾಲರಾಜನ್ ಅವರು ಶಾನ್ವಿಗೆ ತರಬೇತಿ ನೀಡಿದ್ದರು.
ಶಾನ್ವಿಯ ಸಾಧನೆಗೆ ಜಿಲ್ಲಾಧಿಕಾರಿ ಯಶವಂತ್ ಗುರುಕರ್, ಜಿಲ್ಲಾ ಪಂಚಾಯತ್ ಸಿಇಒ ಅನ್ಮೋಲ್ ಜೈನ್, ಎಸ್ಪಿಒ ಶ್ರೀನಿವಾಸ್ ಗೌಡ, ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಹಾಗೂ ನೌಕರರ ಸಂಘದ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.