New Delhi: ಭಾರತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಅಸಾಧಾರಣ ಧೈರ್ಯ ತೋರಿದ ಮೇಜರ್ ಆಶಿಶ್ ದಹಿಯಾ (Major Ashish Dahiya) ಸೇರಿದಂತೆ 33 ಜನರಿಗೆ ಶೌರ್ಯ ಚಕ್ರ ಪ್ರಶಸ್ತಿಯನ್ನು (Shaurya Chakra Award) ನೀಡಿದ್ದಾರೆ. ಈ ಪೈಕಿ 7 ಮಂದಿ ಮರಣೋತ್ತರವಾಗಿ ಈ ಗೌರವ ಪಡೆದಿದ್ದಾರೆ.
ಮೇಜರ್ ದಹಿಯಾ ಅವರು ರಾಷ್ಟ್ರೀಯ ರೈಫಲ್ಸ್ನ 50ನೇ ಬೆಟಾಲಿಯನ್ನ ಅಧಿಕಾರಿಯಾಗಿ, ಜೂನ್ 2022ರಿಂದ 5 ಅಪಾಯಕಾರಿ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ನಾಲ್ವರು ಉಗ್ರರನ್ನು ತಟಸ್ಥಗೊಳಿಸಿ, ಮೂರು ಸ್ಫೋಟಕ ಸಾಧನಗಳನ್ನು ನಿಷ್ಕ್ರಿಯಗೊಳಿಸಿದರು. ಈ ಶೌರ್ಯಕ್ಕಾಗಿ ಅವರಿಗೆ ಶೌರ್ಯ ಚಕ್ರ ನೀಡಲಾಗಿದೆ.
2024ರ ಜೂನ್ 2ರಂದು ಪುಲ್ವಾಮಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಭಯೋತ್ಪಾದಕರು ಗುಂಡು ಹಾರಿಸಿ ಮತ್ತು ಗ್ರೆನೇಡ್ ಎಸೆದು ತಪ್ಪಿಸಿಕೊಳ್ಳಲು ಯತ್ನಿಸಿದರು. ಈ ಸಂದರ್ಭದಲ್ಲಿ ಮೇಜರ್ ದಹಿಯಾ ಅವರು ಧೈರ್ಯದಿಂದ ಎದುರಿಸಿ, ಉಗ್ರರನ್ನು ತೀವ್ರವಾಗಿ ಗಾಯಗೊಳಿಸಿದರು. ತಮ್ಮ ಗೆಳೆಯನಿಗೆ ಗಾಯವಾದಾಗ, ಅವರು ತಕ್ಷಣ ಎದ್ದು ಹೋಗಿ ಆತನನ್ನು ಸುರಕ್ಷಿತ ಸ್ಥಳಕ್ಕೆ ಎಳೆದುಕೊಂಡು ಹೋಗಿ ಪ್ರಾಣ ಉಳಿಸಿದರು.
ಅವರು ದಕ್ಷಿಣ ಕಾಶ್ಮೀರದಲ್ಲಿ ಕಾಟ ಕೊಡುತ್ತಿದ್ದ ಎ-ಪ್ಲಸ್ ವರ್ಗದ ಭಯೋತ್ಪಾದಕನನ್ನು ತಟಸ್ಥಗೊಳಿಸಿ, ಮತ್ತೊಮ್ಮೆ ಜೀವದ ಹಂಗು ನೋಡದೆ ತನ್ನ ಗೆಳೆಯನನ್ನು ರಕ್ಷಿಸಲು ಮುಂದಾದರು.
ಈ ಕಾರ್ಯಚಟುವಟಿಕೆಗಳನ್ನು ಗೌರವಿಸಿ, ರಾಷ್ಟ್ರಪತಿ ಅವರು “50 ನೇ ರಾಷ್ಟ್ರೀಯ ರೈಫಲ್ಸ್ನ ಎಂಜಿನಿಯರ್ ಕಾರ್ಪ್ಸ್ನ ಮೇಜರ್ ಆಶಿಶ್ ದಹಿಯಾ ಅವರಿಗೆ ಶೌರ್ಯ ಚಕ್ರ ನೀಡಿ ಗೌರವಿಸಲಾಗಿದೆ” ಎಂದು ಎಕ್ಸ್ (ಹಳೆಯ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.