Hyderabad: ಪವಿತ್ರ ರಂಜಾನ್ (Ramzan) ಮಾಸದ ಸಮಯದಲ್ಲಿ ಮುಸ್ಲಿಂ ಸರ್ಕಾರಿ ನೌಕರರು ಕಚೇರಿಯಿಂದ ಬೇಗನೆ ಹೊರಡುವಂತೆ ತೆಲಂಗಾಣ ಸರ್ಕಾರ (Telangana government) ಆದೇಶ ಹೊರಡಿಸಿದೆ. ಈ ನಿರ್ಧಾರ ಇದೀಗ ವಿವಾದಕ್ಕೆ ಕಾರಣವಾಗಿದೆ.
ತೆಲಂಗಾಣದ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಉದ್ಯೋಗಿಗಳಿಗೆ ಪ್ರಾರ್ಥನೆಗಾಗಿ ಒಂದು ಗಂಟೆ ಮುಂಚಿತವಾಗಿ ಕೆಲಸ ಮುಗಿಸಲು ಅವಕಾಶ ನೀಡಿದೆ. ಮಾರ್ಚ್ 1 ಅಥವಾ 2ರಿಂದ ಪ್ರಾರಂಭವಾಗುವ ರಂಜಾನ್ ಮಾಸದ ಅವಧಿಯಲ್ಲಿ ಈ ಸೌಲಭ್ಯ ಲಭ್ಯವಿರುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಆದೇಶವು ಮುಸ್ಲಿಂ ಶಿಕ್ಷಕರು, ಗುತ್ತಿಗೆ ನೌಕರರು, ಹೊರಗುತ್ತಿಗೆ ಕಾರ್ಮಿಕರು, ಮಂಡಳಿ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಅನ್ವಯಿಸುತ್ತದೆ. ಮಾರ್ಚ್ 2ರಿಂದ 31ರವರೆಗೆ ಸಂಜೆ 4 ಗಂಟೆಗೆ ಕಚೇರಿಗಳನ್ನು ಬಿಡಲು ಅವಕಾಶವಿದೆ. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಅವರು ಪೂರ್ಣ ಕಾರ್ಯಾವಧಿ ಸೇವೆ ನೀಡಬೇಕಾಗುತ್ತದೆ.
ಈ ನಿರ್ಧಾರವನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದೆ. ಮುಸ್ಲಿಮರನ್ನು ಖುಷಿಪಡಿಸುವ ರಾಜಕೀಯ ತಂತ್ರವಿದು ಎಂದು ಆರೋಪಿಸಿ, ನವರಾತ್ರಿಯ ಉಪವಾಸದ ಸಮಯದಲ್ಲಿ ಹಿಂದೂಗಳಿಗೆ ಇಂತಹ ಸೌಲಭ್ಯ ನೀಡಲಾಗಿದೆಯೇ? ಎಂದು ಪ್ರಶ್ನಿಸಿದೆ.