Mangaluru: ಬಜ್ಪೆದಲ್ಲಿ ನಡೆದ ರೌಡಿಶೀಟರ್ ಮತ್ತು ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಹತ್ಯೆ ಪ್ರಕರಣದಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಈ ಹತ್ಯೆ ಸಂಬಂಧ ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಮುಸಮೀರ್, ಕಲಂದರ್ ಶಾಫಿ, ಆದಿಲ್ ಮೆಹರೂಪ್, ನಾಗರಾಜ್, ಮೊಹಮ್ಮದ್ ರಿಜ್ವಾನ್, ಮತ್ತು ರಂಜಿತ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದರು.
2023 ರಲ್ಲಿ ಸಫ್ವಾನ್ ಮೇಲೆ ಸುಹಾಸ್ ಶೆಟ್ಟಿ ಸ್ನೇಹಿತರು ಪ್ರಶಾಂತ್ ಮತ್ತು ಧನರಾಜ್ ಹಲ್ಲೆ ನಡೆಸಿದ್ದರು. ಇದರಿಂದ ಸಫ್ವಾನ್ಗೆ ಸುಹಾಸ್ ಶೆಟ್ಟಿಯಿಂದ ಜೀವಹಾನಿ ಭೀತಿ ಉಂಟಾಗಿತ್ತು. ಈ ಕಾರಣದಿಂದ ಸುಹಾಸ್ ಶೆಟ್ಟಿಯನ್ನು ಕೊಲ್ಲಲು ನಿರ್ಧಾರ ಮಾಡಲಾಗಿದೆ.
ಕೊಲೆ ಸಂಚು ರೂಪಿಸಿದ ಆದಿಲ್ ಎಂಬಾತನು ಸಫ್ವಾನ್ ಜೊತೆಗೆ ಮಾತನಾಡಿ, ಹತ್ಯೆಗೆ ಐದು ಲಕ್ಷ ರೂಪಾಯಿ ನೀಡಿದ್ದಾರೆ. ಬಳಿಕ ನಿಯಾಜ್, ನಾಗರಾಜ್ ಮತ್ತು ರಂಜಿತ್ರನ್ನು ಸಂಪರ್ಕಿಸಿ, ಕೊಲೆ ನಿರ್ವಹಣೆಗೆ ವ್ಯವಸ್ಥೆ ಮಾಡಲಾಗಿದೆ. ಕೊಲೆಗೂ ಮುನ್ನ ಇಬ್ಬರು ಆರೋಪಿಗಳು ಸಫ್ವಾನ್ ಮನೆ ಬಳಿ ಎರಡು ದಿನ ವಾಸವಿದ್ದು, ಮೇ 1ರಂದು ಸುಹಾಸ್ ಚಲನವಲನಗಳನ್ನು ಗಮನಿಸಿ ಕೊಲೆ ಮಾಡಿದ್ದಾರೆ.
ಕೊಲೆಯ ಸಮಯದಲ್ಲಿ ಎರಡು ಬುರ್ಖಾ ಧರಿಸಿದ ಮಹಿಳೆಯರು ಆರೋಪಿಗಳಿಗೆ ಸಹಾಯ ಮಾಡಿದ್ದು, ಅವರ ವಿಡಿಯೋ ವೈರಲ್ ಆಗಿದೆ. ಈ ಇಬ್ಬರು ಮಹಿಳೆಯರನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.