2030ರ ವೇಳೆಗೆ ಭಾರತದಲ್ಲಿ ಪಳೆಯುಳಿಕೆ (fossil fuel) ಇಂಧನ ಬಳಕೆಯ ಶೇ.50 ರಷ್ಟು ಜೈವಿಕ ಇಂಧನದಿಂದ ಪೂರೈಸುವ ಗುರಿಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಪ್ರಕಟಿಸಿದ್ದಾರೆ.
ಭಾರತದಲ್ಲಿ ವಾಯು ಮಾಲಿನ್ಯ ದೊಡ್ಡ ಸಮಸ್ಯೆಯಾಗಿದ್ದು, ಇದಕ್ಕೆ ಶೇ.40ರಷ್ಟು ಕಾರಣವಾಗಿರುವುದು ಸಾರಿಗೆ ವಲಯ. ಪಳೆಯುಳಿಕೆ ಇಂಧನ ಬಳಕೆ ಈ ಸಮಸ್ಯೆಯನ್ನು ಹೆಚ್ಚು ಮಾಡುತ್ತಿದೆ.
ಇದೀಗ ವಾಹನ ತಯಾರಕರು ಬ್ಯಾಟರಿ ಎಲೆಕ್ಟ್ರಿಕ್, ಹೈಬ್ರಿಡ್, CNG ಸೇರಿದಂತೆ ಹಲವು ಕ್ಲೀನ್ ಇಂಧನ ತಂತ್ರಜ್ಞಾನಗಳತ್ತ ಗಂಭೀರವಾಗಿ ಮುಂದಾಗುತ್ತಿದ್ದಾರೆ.
ಇಂಧನ ಕ್ಷೇತ್ರ ಹಾಗೂ ಆಟೋಮೊಬೈಲ್ ಎಂಜಿನಿಯರಿಂಗ್ನಲ್ಲಿ ನವೀನ ಸಂಶೋಧನೆ ನಡೆಯುತ್ತಿದೆ. ಪರಿಸರ ಸಂರಕ್ಷಣೆಯೊಂದಿಗೆ, ಭಾರತವನ್ನು ಇಂಗಾಲ-ತಟಸ್ಥ ದೇಶವನ್ನಾಗಿ ಮಾಡುವ ಗುರಿಯಿದೆ ಎಂದು ಗಡ್ಕರಿ ಹೇಳಿದರು.
ಭಾರತ ಈಗ ಎಥೆನಾಲ್, ಫ್ಲೆಕ್ಸ್ ಎಂಜಿನ್, ಮೆಥನಾಲ್, ಬಯೋಡೀಸೆಲ್, ಬಯೋ ಎಲ್ಎನ್ಜಿ, ಸಿಎನ್ಜಿ, ಎಲೆಕ್ಟ್ರಿಕ್ ಹಾಗೂ ಹೈಡ್ರೋಜನ್ ಇಂಧನಗಳತ್ತ ಒತ್ತು ನೀಡುತ್ತಿದೆ. ಪಳೆಯುಳಿಕೆ ಇಂಧನ ಆಮದಿಗೆ ವರ್ಷಕ್ಕೆ ₹22 ಲಕ್ಷ ಕೋಟಿ ಖರ್ಚಾಗುತ್ತಿದೆ.
ಇತ್ತೀಚೆಗೆ ಪೆಟ್ರೋಲಿನಲ್ಲಿ ಶೇ.20ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗಿದೆ. ಇದು ಶುದ್ಧ ಇಂಧನದ ದಿಕ್ಕಿನಲ್ಲಿ ಮತ್ತೊಂದು ಬಲವಾದ ಹೆಜ್ಜೆ.
ಭಾರತೀಯ ಆಟೋಮೊಬೈಲ್ ವಲಯವು ಈಗಾಗಲೇ ಕೋಟ್ಯಂತರ ಉದ್ಯೋಗಗಳನ್ನು ನೀಡಿದ್ದು, ₹3 ಲಕ್ಷ ಕೋಟಿ ರಫ್ತು ಮೌಲ್ಯ ಹೊಂದಿದೆ. ಬಜಾಜ್, ಟಿವಿಎಸ್, ಹೀರೋ ಮುಂತಾದ ಕಂಪನಿಗಳು ಶೇ.50 ರಷ್ಟು ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ.
ಈ ಎಲ್ಲಾ ಹೆಜ್ಜೆಗಳು ಭಾರತದ ಶುದ್ಧ ಇಂಧನ ಭವಿಷ್ಯ ಮತ್ತು ಆರ್ಥಿಕ ಬೆಳವಣಿಗೆಗೆ ದಾರಿ ಮಾಡಿಕೊಡಲಿವೆ ಎಂದು ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.