
Hassan: ಕನ್ನಡದ ಹಿರಿಯ ಸಾಹಿತಿ ಬಾನು ಮುಷ್ತಾಕ್ (Banu Mushtaq) ಅವರಿಗೆ ಪ್ರಖ್ಯಾತ ಬೂಕರ್ ಪ್ರಶಸ್ತಿ (Booker Prize) ಲಭಿಸಿದೆ. ಇದರಿಂದಾಗಿ ಅವರು ಈ ಪ್ರಶಸ್ತಿ ಗೆದ್ದ ಮೊದಲ ಕನ್ನಡ ಸಾಹಿತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಪ್ರಶಸ್ತಿ ಅವರಿಗೆ ‘ಹಾರ್ಟ್ ಲ್ಯಾಂಪ್’ ಎಂಬ ಕೃತಿಗೆ ಲಭಿಸಿದೆ.
ಇಂಗ್ಲೆಂಡಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು. ಈ ಬೂಕರ್ ಪ್ರಶಸ್ತಿಯ ನಗದು ಮೊತ್ತ ಸುಮಾರು ರೂ. 57.28 ಲಕ್ಷ.
ಬಾನು ಮುಷ್ತಾಕ್ ಅವರು ಹಾಸನ ಜಿಲ್ಲೆಗೆ ಸೇರಿದವರು. ಈ ವರ್ಷ ಫೆಬ್ರವರಿಯಲ್ಲಿ ಅವರು ಬೂಕರ್ ಪ್ರಶಸ್ತಿಯ ಲಾಂಗ್ ಲಿಸ್ಟಿಗೆ ಆಯ್ಕೆಯಾದರು. ಬಳಿಕ ಏಪ್ರಿಲ್ 8 ರಂದು ಶಾರ್ಟ್ ಲಿಸ್ಟ್ಗೂ ಆಯ್ಕೆಗೊಂಡರು.
ಅವರ ‘ಹಸೀನಾ ಮತ್ತು ಇತರೆ ಕತೆಗಳು’ ಎಂಬ 12 ಕಥೆಗಳ ಸಂಕಲನವನ್ನು ದೀಪಾ ಭಸ್ತಿ ಅವರು ಇಂಗ್ಲಿಷ್ಗೆ ಅನುವಾದಿಸಿದ್ದಾರೆ. ಈ ವರ್ಷ 153 ಕೃತಿಗಳ ಪೈಕಿ ಶಾರ್ಟ್ ಲಿಸ್ಟ್ಗೆ 6 ಕೃತಿಗಳು ಆಯ್ಕೆಯಾದವು. ಅದರಲ್ಲಿ ಬಾನು ಮುಷ್ತಾಕ್ ಅವರ ಕೃತಿ ಕೂಡಾ ಸೇರಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಾನು ಮುಷ್ತಾಕ್, “ಈ ಗೆಲುವು ವೈವಿಧ್ಯತೆಯ ಗೆಲುವು. ಪ್ರತಿಯೊಂದು ಅನುಭವವೂ ತನ್ನದೇ ತೂಕ ಹೊಂದಿರುತ್ತದೆ. ಅದೇ ನಂಬಿಕೆಯಿಂದ ನಾನು ಈ ಪುಸ್ತಕ ಬರೆದಿದ್ದೇನೆ” ಎಂದು ಹೇಳಿದರು.
ಅನುವಾದಕಿ ದೀಪಾ ಭಸ್ತಿ ಅವರು ಈ ಬಗ್ಗೆ ಹೇಳಿ, “ನನ್ನ ಭಾಷೆಗೆ ದೊರೆತ ಸುಂದರ ಗೌರವ ಇದಾಗಿದೆ” ಎಂದು ಸಂತೋಷ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಬಾನು ಮುಷ್ತಾಕ್ ಅವರನ್ನು ಅಭಿನಂದಿಸಿ, ಈ ಸಾಧನೆ ಕನ್ನಡದ ಹೆಮ್ಮೆ ಎಂದು ತಿಳಿಸಿದ್ದಾರೆ.