
Delhi: ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ಸೌತ್ ಬ್ಲಾಕ್ನಲ್ಲಿ 48ನೇ ಪ್ರಗತಿ ಸಭೆಗೆ (Pragati Sabha) ಅಧ್ಯಕ್ಷತೆ ವಹಿಸಿದರು. ಈ ಸಭೆಯಲ್ಲಿ ಗಣಿಗಾರಿಕೆ, ರೈಲ್ವೆ ಮತ್ತು ಜಲ ಸಂಪನ್ಮೂಲ ವಲಯದ ಪ್ರಮುಖ ಯೋಜನೆಗಳ ಪರಿಶೀಲನೆ ನಡೆಸಿದರು.
ಪ್ರಗತಿ ವೇದಿಕೆ ಎಂಬುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯುಕ್ತಿಯುತ ಸಂಯೋಜನೆಯ ಮೂಲಕ ಯೋಜನೆಗಳ ಸಕಾಲಿಕ ಅನುಷ್ಠಾನವನ್ನು ಉತ್ತೇಜಿಸಲು ರೂಪುಗೊಂಡಿದೆ ಎಂದು ಪ್ರಧಾನಿ ಹೇಳಿದರು.
ಪ್ರಧಾನ ಮಂತ್ರಿ – ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ (PM-ABHIM) ಯೋಜನೆ ಬಗ್ಗೆ ಮಾತನಾಡಿದ ಅವರು, ಎಲ್ಲಾ ರಾಜ್ಯಗಳು ಆರೋಗ್ಯ ಸೇವೆಗಳ ವಿಸ್ತರಣೆಗೆ ಗಂಭೀರವಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ದೂರದ, ಗಡಿ ಪ್ರದೇಶಗಳು ಹಾಗೂ ಬುಡಕಟ್ಟು ಜನಾಂಗದ ಪ್ರದೇಶಗಳಿಗೆ ವಿಶೇಷ ಗಮನ ನೀಡಬೇಕು ಎಂದು ಅವರು ಹೇಳಿದರು.
ಬಡವರು ಹಾಗೂ ಅಗತ್ಯವಿರುವವರಿಗೆ ಸಮಾನ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗಬೇಕು. ಈಗಿರುವ ಅಸಮತೆಗಳನ್ನು ಕಡಿಮೆ ಮಾಡಲು ತಕ್ಷಣದ ಹಾಗೂ ನಿರಂತರ ಪ್ರಯತ್ನ ಅಗತ್ಯ ಎಂದು ಪ್ರಧಾನಿ ಒತ್ತಾಯಿಸಿದರು.
ಪ್ರಧಾನಿ ಮೋದಿ ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆ ಕುರಿತಾಗಿ “ಆಪರೇಷನ್ ಸಿಂಧೂರ್” ನ ಯಶಸ್ಸನ್ನು ಉಲ್ಲೇಖಿಸಿದರು. ಇದನ್ನು ಭಾರತದ ಬಲಿಷ್ಠತೆಗೆ ಸಾಕ್ಷಿ ಎಂದು ಹೇಳಿದರು. ಈ ಕ್ಷೇತ್ರದಲ್ಲಿ ವಿವಿಧ ರಾಜ್ಯಗಳು ಹಾಗೂ ಇಲಾಖೆಗಳ ನಾವೀನ್ಯತೆಯನ್ನು ಅಭಿನಂದಿಸಿದರು. ಈ ಅವಕಾಶವನ್ನು ಬಳಸಿಕೊಂಡು ರಾಜ್ಯಗಳು ಸ್ವಾವಲಂಬನೆಗೆ ಕೊಡುಗೆ ನೀಡಬಹುದಾಗಿದೆ ಎಂದರು.
ಸಭೆಯಲ್ಲಿ ಪ್ರಧಾನಿಯವರು ವಿವಿಧ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿ, ಫಲಿತಾಂಶ ಆಧಾರಿತ ಕಾರ್ಯಚಟುವಟಿಕೆಗಾಗಿ ಅಧಿಕಾರಿಗಳಿಗೆ ಸಲಹೆ ನೀಡಿದರು.