
Bengaluru: ಸಿಎಂ ಸಿದ್ದರಾಮಯ್ಯನವರು ಆಡಳಿತದ ಮೇಲೆ ಕಂಟ್ರೋಲ್ ಕಳೆದುಕೊಂಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, (DCM D.K. Shivakumar) ‘‘ಅವರು ನಿಯಂತ್ರಣ ಕಳೆದುಕೊಂಡಿಲ್ಲ. ನಾನು ಈ ಬಗ್ಗೆ ಏನೂ ಕೇಳಿಲ್ಲ. ನಮಗೆ ಹೈಕಮಾಂಡ್ ಇದೆ – ಅದು ಎಲ್ಲವನ್ನೂ ಗಮನದಲ್ಲಿರಿಸುತ್ತದೆ’’ ಎಂದರು.
ಇಂದು ಸದಾಶಿವನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘‘ನಾನು ಎಲ್ಲರೊಂದಿಗೆ ಮಾತನಾಡುತ್ತಿದ್ದೇನೆ. ಯಾವುದೇ ಸಮಸ್ಯೆ ಇಲ್ಲ. ಮಾಧ್ಯಮವೇ ವಿಷಯವನ್ನು ಹೆಚ್ಚಾಗಿ ತೋರಿಸುತ್ತಿದೆ’’ ಎಂದು ಹೇಳಿದರು.
ಎತ್ತಿನಹೊಳೆ ಯೋಜನೆ ಬಗ್ಗೆ: ತುಮಕೂರಿಗೆ ಸಂಬಂಧಿಸಿದಂತೆ, ‘‘ಈ ಯೋಜನೆಯ ಕೆಲಸ ಮುಗಿಯಬೇಕು. ಗುತ್ತಿಗೆದಾರರ ಸಭೆ ನಾಳೆಗೆ ಮುಂದೂಡಲಾಗಿದೆ. ಟೆಕ್ನಿಕಲ್ ಸಮಸ್ಯೆಗಳ ಪರಿಶೀಲನೆಗೂ ಹೋಗುತ್ತಿದ್ದೇನೆ. ಜನರ ಮತ್ತು ಶಾಸಕರ ಅಭಿಪ್ರಾಯವೂ ಕೇಳುತ್ತೇನೆ. ಕೇಂದ್ರ ಸಚಿವ ಸೋಮಣ್ಣ ಮನವಿ ಮಾಡಿದ ಕಾರಣ ಸಭೆ ಮುಂದೂಡಲಾಗಿದೆ’’ ಎಂದರು.
ಬಿ.ಆರ್. ಪಾಟೀಲ್ ಭೇಟಿ ಕುರಿತು: ‘‘ಪಕ್ಷದ ಅಧ್ಯಕ್ಷನಾಗಿ ವಾಸ್ತವಾಂಶ ಕೇಳಬೇಕಾಗಿತ್ತು. ಅವರು ಫೋನ್ ಮಾಡಿದ ಬಳಿಕ ಬಂದರು. ನಾನು, ಸಿಎಂ ಹಾಗೂ ಸಚಿವ ಜಮೀರ್ ಜೊತೆಗೆ ಮಾತನಾಡುತ್ತೇನೆ. ವರಿಷ್ಠರು ಕೂಡ ಬಂದು ಎಲ್ಲರೊಂದಿಗೆ ಚರ್ಚಿಸುತ್ತಾರೆ’’ ಎಂದರು.
ಸುರೇಶ್ ಬಾಬು ಪತ್ರ ಕುರಿತು: ಜೆಡಿಎಸ್ ನಾಯಕ ಸುರೇಶ್ ಬಾಬು ಪತ್ರ ಬರೆದ ವಿಚಾರದಲ್ಲಿ ಪ್ರತಿಕ್ರಿಯಿಸಿದ ಡಿಕೆಶಿ, ‘‘ಅವರು ತಮ್ಮ ಪಕ್ಷದ ವಿಚಾರ ನೋಡಿ. ತಮ್ಮ ಮನೆಯ ದೋಸೆ ತವಾದ ತೂತು ಮುಚ್ಚಿಕೊಳ್ಳಲಿ’’ ಎಂದು ತಿರುಗೇಟು ನೀಡಿದರು.