
Hanumantapura, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರ ಗ್ರಾಮದ ಅತ್ಯಂತ ಪುರಾತನ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದ ಸಂಪ್ರೋಕ್ಷಣೆ ಹಾಗೂ ನೂತನ ವಿಮಾನ ಗೋಪುರ, ಶಿಖರ ಕಳಸ ಪ್ರತಿಷ್ಠಾಪನಾ ಮಹೋತ್ಸವವನ್ನು ಎರಡು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.
ಸೋಮವಾರ ಬೆಳಗ್ಗೆಯಿಂದಲೇ ವಿವಿಧ ರೀತಿಯಲ್ಲಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿ ವಿವಿಧ ಹೋಮಗಳು, ದೇವರಿಗೆ ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ ತೀರ್ಥ ಪ್ರಸಾದ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ತಾಲ್ಲೂಕಿನ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಭಕ್ತಾದಿಗಳು ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ದೇವರ ದರ್ಶನಕ್ಕೆ ಬಂದಿದ್ದ ಭಕ್ತಾದಿಗಳಿಗೆ ದಿವಂಗತ ಎ.ಆರ್. ವೀರಭದ್ರಪ್ಪ ಮಕ್ಕಳು ಮತ್ತು ಕುಟುಂಬ ಸದಸ್ಯರಿಂದ ಪ್ರಸಾದವನ್ನು ವಿನಿಯೋಗಿಸಲಾಯಿತು.
ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದ ಸಂಪ್ರೋಕ್ಷಣೆ ಹಾಗೂ ನೂತನ ವಿಮಾನ ಗೋಪುರ ಶಿಖರ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಶಾಸಕ ಬಿ.ಎನ್. ರವಿ ಕುಮಾರ್, ಮಾಜಿ ಶಾಸಕ ರಾಜಣ್ಣ,ಕಾಂಗ್ರೆಸ್ ಮುಖಂಡರಾದ ರಾಜೀವ್ ಗೌಡ, ಶ್ರೀ ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಡಾ. ಶಶಿಧರ್ ಮುನಿಯಪ್ಪ, ಕೆಎಂಎಫ್ ನಿರ್ದೇಶಕ ಶ್ರೀನಿವಾಸ ರಾಮಯ್ಯ, ಸಮಾಜ ಸೇವಕ ಹನುಮಾನ್ ಬಾಬು ವೀರಭದ್ರಪ್ಪ ಅವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ದೇವಾಲಯದ ಸೇವಾಕರ್ತ ಮುನೇಗೌಡ ಮಾತನಾಡಿ, ಸುಮಾರು 400ರಿಂದ 500 ವರ್ಷಗಳ ಇತಿಹಾಸವನ್ನು ಹೊಂದಿರುವ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯ ಮೂರು ಪ್ರಾಂಗಣದಲ್ಲಿ ಹಿಂದೆ ಇತ್ತು. ದೇವಾಲಯ ಶಿಥಿಲ ವ್ಯವಸ್ಥೆ ತಲುಪಿದಾಗ ಗ್ರಾಮಸ್ಥರೆಲ್ಲ ಸೇರಿ 2012 ರಲ್ಲಿ ಪುನರ್ ಪ್ರತಿಷ್ಠಾಪನೆ ಮಾಡಿದರು. ಪ್ರಸ್ತುತ ಗ್ರಾಮದ ಮುಖಂಡರಾಗಿದ್ದ ದಿವಂಗತ ಎ.ಆರ್. ವೀರಭದ್ರಪ್ಪ ಮಕ್ಕಳಾದ ಹನುಮಾನ್, ಭರತ್ ವೀರಭದ್ರಪ್ಪ, ಚಂದ್ರಶೇಖರ್, ನಿರಂಜನ್ ಮತ್ತು ವೀರಭದ್ರಪ್ಪ ಅವರ ಸಹೋದರ ಮಹದೇವಪ್ಪ ಅವರ ಸಹಕಾರ ಮತ್ತು ಗ್ರಾಮಸ್ಥರೆಲ್ಲಾ ಜೊತೆಗೂಡಿ ದೇವಾಲಯದ ಅಭಿವೃದ್ಧಿ ಕಾಮಗಾರಿಗಳು ಮತ್ತು ಪೂಜಾ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಿರಂಜನ್, ಆನಂದ್ ರಾಜ್, ಶಿವಣ್ಣ, ವೆಂಕಟೇಶ್ ವಿಜಯ್, ಡಿಸಿಸಿ ಬ್ಯಾಂಕಿನ ನಿರ್ದೇಶಕ ಎ. ನಾಗರಾಜ್, ನಗರಸಭಾ ಸದಸ್ಯ ಬಸ್ ಮಂಜುನಾಥ್, ಚಿತ್ರ ಮನೋಹರ್, ಶ್ರೀನಿವಾಸ್ ಚಿನ್ನಿ, ಬಸ್ ಅಪ್ಪಿ, ಸತೀಶ್, ಮಂಜು, ವಿಶ್ವ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಲಕ್ಷ್ಮಿ ನಾರಾಯಣ ರೆಡ್ಡಿ, ಹನುಮಂತಪುರ ಗ್ರಾಮಸ್ಥರು ಭಕ್ತಾದಿಗಳು ಹಾಜರಿದ್ದರು.