
Sidlaghatta : KIADB ಗೆ ಜಮೀನು ನೀಡಲು ಸಿದ್ದರಿರುವ ಮತ್ತು ಸಿದ್ದರಿಲ್ಲದ ರೈತರ ನಡುವೆ ನಡೆದಿರುವ ಮೊಬೈಲ್ ಸಂಭಾಷಣೆಗೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ವಿನಾಕಾರಣ ರೈತರ ಮೇಲೆ ದೂರು ದಾಖಲಿಸಲಾಗಿದೆ. ರೈತರ ಬಂಧನಕ್ಕೂ ಪೊಲೀಸರು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿ ರೈತರು ಸೋಮವಾರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಪ್ರಯತ್ನ ನಡೆಸಿದರು.
ಆದರೆ ಪ್ರತಿಭಟನೆ ನಡೆಸಲು ಪೂರ್ವಾನುಮತಿ ಪಡೆದಿಲ್ಲದ ಕಾರಣ ಪೊಲೀಸರು ರೈತರನ್ನು ಠಾಣೆಯ ಅವರಣದಲ್ಲೆ ತಡೆದರು. ನಂತರ ರೈತ ಸಂಘದ ಪ್ರಮುಖರನ್ನು ಠಾಣೆಯ ಒಳಗೆ ಕರೆಸಿಕೊಂಡು ಅವರೊಂದಿಗೆ ಪೊಲೀಸ್ ಅಧಿಕಾರಿಗಳು ಚರ್ಚಿಸಿ ಸಮಸ್ಯೆ ಇತ್ಯರ್ಥಪಡಿಸಿದರು.
ಈ ವೇಳೆ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ನಾವು ಕೆಐಎಡಿಬಿಗೆ ಜಮೀನು ನೀಡುವುದಿಲ್ಲ. ರೈತರ ಪರ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಕೆಲವರು ಕೆಐಎಡಿಬಿಗೆ ಭೂಮಿ ಬಿಟ್ಟುಕೊಡುವುದಾಗಿಯೂ ಹೋರಾಟ ಮಾಡುತ್ತಿದ್ದಾರೆ. ನಮ್ಮ ಹೋರಾಟ ನಮ್ಮದು ಅವರ ಹೋರಾಟ ಅವರದ್ದು ನಮ್ಮದೇನು ತಕರಾರಿಲ್ಲ ಎಂದರು.
ಆದರೆ ನಮ್ಮೊಂದಿಗೆ ನಿಕಟ ಸಂಪರ್ಕ ಇಲ್ಲದ ಯಾರೋ ಇಬ್ಬರು ಪರಸ್ಪರ ಪರಿಚಿತರು ಮಾತನಾಡಿಕೊಂಡಿರುವ ಮೊಬೈಲ್ ಸಂಭಾಷಣೆ ಆಧಾರದಲ್ಲಿ ಇತರೆ ರೈತರ ಮೇಲೆ ಕೇಸು ದಾಖಲಿಸಿ ಅವರನ್ನು ಬಂಧಿಸಲು ಪೊಲೀಸರು ತೆರಳಿದ್ದು ಸರಿಯಲ್ಲ ಎಂದರು.
ಮೊಬೈಲ್ ಸಂಭಾಷಣೆಯಲ್ಲಿ ಇಬ್ಬರಷ್ಟೆ ಮಾತನಾಡಿಕೊಂಡಿದ್ದು ಅದು ಸರಿ ತಪ್ಪು ಏನೇ ಇದ್ದರೂ ಕಾನೂನಿಂತೆ ಕ್ರಮ ಕೈಗೊಳ್ಳಿ, ನಮ್ಮದೇನು ಅಭ್ಯಂತರವಿಲ್ಲ. ಆದರೆ ಬೇರೆ ರೈತರ ಮೇಲೆ ಕೇಸು ದಾಖಲಿಸುವುದು, ಅವರನ್ನು ಬಂಧಿಸುವಂತ ಪ್ರಯತ್ನ ಮಾಡುವುದು ಬೇಡ ಎಂದು ತಾಕೀತು ಮಾಡಿದರು.
ತಾಲ್ಲೂಕು ಕಚೇರಿಯಲ್ಲಿ ಕೆಐಎಡಿಬಿ ವ್ಯಾಪ್ತಿಯ ಜಮೀನುಗಳ ಮಂಜೂರು ಕಡತ ನಾಪತ್ತೆಯಾಗಿದ್ದು ಅದರ ಹಿಂದೆ ಕಾಣದ ಭೂ ಮಾಫಿಯಾದ ಕೈಗಳು ಇವೆ. ಆ ಮಾಫಿಯಾವೇ ರೈತರ ಸಂಘಗಳ ನಡುವೆ ಹಾಗೂ ರೈತರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಅವರನ್ನು ಪತ್ತೆ ಹಚ್ಚಬೇಕೆಂದರು.
ಚರ್ಚೆ ಸಮಯದಲ್ಲಿ ಡೀಪ್ ಟೆಕ್ ಪಾರ್ಕ್ ಬೋರ್ಡುಗಳನ್ನು ಯಾವುದೋ ರಿಯಲ್ ಎಸ್ಟೇಟ್ ಕಂಪನಿಯವರು ನೆಟ್ಟಿದ್ದು, ಅದನ್ನು ರೈತರು ಕಿತ್ತು ತಂದು ತಹಶೀಲ್ದಾರ್ಗೆ ಒಪ್ಪಿಸಿದ್ದು, ಖಾಸಗಿ ಏಜೆನ್ಸಿಗಳಿಂದ ಡ್ರೋಣ್ ಬಳಸಿ ಜಮೀನುಗಳ ಸರ್ವೆ, ಅದಕ್ಕೆ ರೈತರಿಂದ ಅಡ್ಡಿ… ಈ ಎಲ್ಲ ವಿಚಾರಗಳ ಬಗ್ಗೆಯೂ ಕೆಲ ಕಾಲ ಚರ್ಚೆಗಳು ನಡೆದವು.
ಈ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್ ಅವರು ಇತ್ತೀಚಿನ ದಿನಗಳಲ್ಲಿ ಕೆಐಎಡಿಬಿ ಪರ ಮತ್ತು ವಿರೋಧದ ಹೋರಾಟಗಳು, ಅದರ ಬೆಳವಣಿಗೆಗಳ ಬಗ್ಗೆ ವಿವರಿಸಿ ಕೈಗೊಂಡ ಕ್ರಮಗಳ ಬಗ್ಗೆಯೂ ಡಿವೈಎಸ್ಪಿ ಮತ್ತು ರೈತರಿಗೆ ಮನವರಿಕೆ ಮಾಡಿದರು.
ಅಂತಿಮವಾಗಿ ಡಿವೈಎಸ್ಪಿ ಮುರಳೀಧರ್ ಅವರು, ಇದೀಗ ಮೊಬೈಲ್ ಸಂಭಾಷಣೆ ಆಡಿಯೋ ಆಧಾರದಲ್ಲಿ ದಾಖಲಾಗಿರುವ ಕೇಸು ಸೇರಿದಂತೆ ಕೆಐಎಡಿಬಿಗೆ ಸಂಬಂಧಿಸಿದಂತೆ ಆದ ಯಾವುದೆ ಪ್ರಕರಣಗಳಾಗಲಿ ವಿನಾಕಾರಣ ರೈತರನ್ನು ಅಥವಾ ಇನ್ನಾರ ಮೇಲಾಗಲಿ ದೂರು ದಾಖಲಿಸಲಾಗುವುದಿಲ್ಲ.
ಒಂದೊಮ್ಮೆ ನೀವು ಹೇಳಿದಂತೆ ಸಂಬಂಧವೇ ಇಲ್ಲದ ಅಮಾಯಕ ರೈತರ ಮೇಲೆ ಕೇಸು ದಾಖಲಾಗಿದ್ದಾರೆ ತನಿಖೆ ನಡೆಸುತ್ತೇವೆ. ನಿಜವಾಗಲೂ ಅವರದ್ದು ಯಾವುದೆ ಪಾತ್ರ ಇಲ್ಲ ಎಂಬುದಾದರೆ ಅವರನ್ನು ಕೇಸಿನಿಂದ ಕೈ ಬಿಡಲಾಗುವುದು, ರೈತರು ವಿನಾಕಾರಣ ಆತಂಕಪಡುವುದು ಬೇಡ ಎಂದರು.
ಇದೀಗ ಪ್ರಕರಣ ತನಿಖೆ ಹಂತದಲ್ಲಿದ್ದು ಈ ಬಗ್ಗೆ ಹೆಚ್ಚು ಚರ್ಚೆಗಳು ಬೇಡ, ಪಾರದರ್ಶಕವಾಗಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಹೇಳಿದರು.
ಎಸ್ಐ ಜಿ.ನಾಗರಾಜ್, ರೈತ ಸಂಘದ ಅಧ್ಯಕ್ಷ ತಾದೂರು ಮಂಜುನಾಥ್, ಹಿತ್ತಲಹಳ್ಳಿ ರಮೇಶ್, ವೀರಾಪುರ ಮುನಿನಂಜಪ್ಪ, ಎ.ಜಿ.ನಾರಾಯಣಸ್ವಾಮಿ, ಹೀರೆಬಲ್ಲ ಕೃಷ್ಣಪ್ಪ, ಯಣ್ಣೂರು ಮಂಜುನಾಥ್ ಹಾಜರಿದ್ದರು.