
Sidlaghatta : DCC Bank ನ ಆಡಳಿತ ಮಂಡಳಿ ರಚನೆಯಾದ ಕೂಡಲೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಮತ್ತು ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಸಾಲ ನೀಡುವ ಕೆಲಸವನ್ನು ಅರಂಭಿಸುತ್ತೇವೆ ಎಂದು ಡಿಸಿಸಿ ಬ್ಯಾಂಕ್ ನ ನೂತನ ನಿರ್ದೇಶಕ ಡಾಲ್ಫಿನ್ ನಾಗರಾಜ್ ತಿಳಿಸಿದರು.
ನಗರದಲ್ಲಿನ ಶಿಡ್ಲಘಟ್ಟ ಟೌನ್ SFCS ಬ್ಯಾಂಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್ ನ ಆಡಳಿತ ಮಂಡಳಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಳೆದ ಒಂದೂವರೆ ವರ್ಷದಿಂದಲೂ ಬ್ಯಾಂಕ್ ನ ಆಡಳಿತ ಮಂಡಳಿ ಇಲ್ಲದ ಕಾರಣ ಸಾಲ ವಿತರಣೆ ನಡೆದಿಲ್ಲ. ಇದೀಗ ನೂತನ ಆಡಳಿತ ಮಂಡಳಿ ರಚನೆಯಾದ ಕೂಡಲೆ ಸಾಲ ನೀಡುವ ಮತ್ತು ಇತರೆ ಎಲ್ಲ ಚಟುವಟಿಕೆಗಳನ್ನು ಆರಂಭಿಸಲಾಗುವುದು ಎಂದರು.
ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಸಿಎಂ ಆದರೆ ಬ್ಯಾಂಕ್ ನ ಸಾಲ ಮನ್ನಾ ಆಗಲಿದೆ ಎಂದು ಕೆಲವರು ವದಂತಿ ಹಬ್ಬಿಸಿದ್ದರಿಂದ ಕೋಲಾರ ಭಾಗದಲ್ಲಿ ಬಹುತೇಕ ಮಂದಿ ಸಾಲ ವಾಪಸ್ ಕಟ್ಟಲಿಲ್ಲ.
ಇದರಿಂದ ಬ್ಯಾಂಕ್ ಗೆ ಅಲ್ಪ ಸ್ವಲ್ಪ ಮಟ್ಟಿಗೆ ಆರ್ಥಿಕ ಹಿನ್ನಡೆ ಆಗಿದ್ದು ನಿಜ. ಅದು ಬಿಟ್ಟರೆ ಮಿಕ್ಕಂತೆ ಎಲ್ಲ ಕಡೆ ಸಾಲ ವಸೂಲಾತಿ ಉತ್ತಮವಾಗಿಯೆ ಆಗಿದೆ. ಎಲ್ಲವೂ ಸರಿಯಾಗಲಿದೆ, ರೈತರಿಗೆ ಮತ್ತು ಮಹಿಳಾ ಸ್ವ ಸಹಾಯ ಸಂಘಗಳಿಗೆ ನೆರವಾಗಲಿದೆ ಎಂದು ಹೇಳಿದರು.
ಶಿಡ್ಲಘಟ್ಟ ಟೌನ್ ಎಸ್.ಎಫ್.ಸಿ.ಎಸ್ ಬ್ಯಾಂಕ್ ಅಧ್ಯಕ್ಷ ಶೆಟ್ಟಹಳ್ಳಿ ರಾಮಚಂದ್ರ ಮಾತನಾಡಿ, ಡಿಸಿಸಿ ಬ್ಯಾಂಕ್ ಗೆ ನಿರ್ದೇಶಕರಾಗಿ ನೂತನವಾಗಿ ಅವಿರೋಧ ಆಯ್ಕೆಯಾದ ನಾಗರಾಜ್ ಅವರಿಂದ ನಾವು ಈ ತಾಲ್ಲೂಕಿಗೆ ಹೆಚ್ಚಿನ ನೆರವು, ಸಹಾಯವನ್ನು ನಿರೀಕ್ಷಿಸುತ್ತೇವೆ ಎಂದರು.
ಕಳೆದ ಅವಧಿಯಲ್ಲಿ ಡಿಸಿಸಿ ಬ್ಯಾಂಕ್ಗೆ ಉಪಾಧ್ಯಕ್ಷರಾಗಿದ್ದಾಗ ನಿರೀಕ್ಷೆ ಮೀರಿ ಕೆಲಸ ಮಾಡಿ ನೆರವು ನೀಡಿದ್ದ ಅವರು ಈ ಬಾರಿ ಅದಕ್ಕೂ ಮಿಗಿಲಾಗಿ ರೈತರು, ಮಹಿಳೆಯರಿಗೆ ನೆರವಾಗಬೇಕೆಂದು ಮನವಿ ಮಾಡಿದರು.
ಶಿಡ್ಲಘಟ್ಟ ಟೌನ್ ಎಸ್.ಎಫ್.ಸಿ.ಎಸ್ ಬ್ಯಾಂಕ್ ನ ಆಡಳಿತ ಮಂಡಳಿಯಿಂದ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಡಿಸಿಸಿ ಬ್ಯಾಂಕ್ ನ ಶಿಡ್ಲಘಟ್ಟ ಶಾಖೆಯ ವ್ಯವಸ್ಥಾಪಕ ಆನಂದ್, ವೇಣುಗೋಪಾಲ್, ನಳಿನಿ ಶಶಿಧರ್, ವಿಜಯಕುಮಾರ್, ವೆಂಕಟೇಶಪ್ಪ, ಮಂಜುನಾಥ್, ಶಿವಣ್ಣ, ದೇವಿಕ, ಆರಾಧ್ಯ ಹಾಜರಿದ್ದರು.