ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ (Terrorism) ದಾಳಿಯ ನಂತರ ಭಾರತ ಐದು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ನಿರ್ಧಾರಗಳಲ್ಲಿ ಒಂದು – ಸಿಂಧೂ ನದಿಯಿಂದ ಪಾಕಿಸ್ತಾನಕ್ಕೆ ನೀರು ಬಿಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದು. ಪಾಕಿಸ್ತಾನ ಇದನ್ನು ವಿಶ್ವಸಂಸ್ಥೆಯಲ್ಲಿ ಪ್ರಶ್ನಿಸಿ ಭಾರತವನ್ನು ಟೀಕಿಸಿದೆ. ಆದರೆ, ಭಾರತ ಈ ಆರೋಪಗಳಿಗೆ ತಕ್ಕ ಪ್ರತಿಸ್ಪಂದನೆ ನೀಡಿದೆ.
ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ ಹರೀಶ್ ಪರ್ವತನೇನಿ ಅವರು ಮಾತನಾಡುತ್ತಾ, ಪಹಲ್ಗಾಮ್ ದಾಳಿ ಮಾತ್ರವಲ್ಲದೆ ಅನೇಕ ಭಯೋತ್ಪಾದಕ ದಾಳಿಗಳ ಉದಾಹರಣೆಗಳನ್ನು ನೀಡಿದ್ದಾರೆ. ಪಾಕಿಸ್ತಾನವು 1960 ರ ಸಿಂಧು ಜಲ ಒಪ್ಪಂದದ ಶ್ರದ್ಧೆಗೆ ಧಕ್ಕೆ ತರುತ್ತಿದೆ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನ ಈ ಒಪ್ಪಂದದ ಬಗ್ಗೆ ತಪ್ಪುಮಾಹಿತಿಯನ್ನು ಹರಡುತ್ತಿರುವುದನ್ನು ಅವರು ತೀವ್ರವಾಗಿ ಖಂಡಿಸಿದರು.
ಭಾರತವು ಈ ಒಪ್ಪಂದವನ್ನು ಮುರಿದಿಲ್ಲ. ಆದರೆ, ಪಾಕಿಸ್ತಾನದಿಂದ ನಡೆಯುತ್ತಿರುವ ಭಯೋತ್ಪಾದನೆಗಳು ಈ ಒಪ್ಪಂದವನ್ನು ಅರ್ಥಹೀನವಾಗಿಸುತ್ತಿವೆ. ಕಳೆದ ನಾಲ್ಕು ದಶಕಗಳಲ್ಲಿ 20,000 ಕ್ಕೂ ಹೆಚ್ಚು ಭಾರತೀಯರು ಈ ದಾಳಿಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿ ಇದಕ್ಕೆ ಉದಾಹರಣೆ.
ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಗೆ ಆಶ್ರಯ ನೀಡುತ್ತಿದ್ದರೂ, ಭಾರತ ಇದುವರೆಗೆ ಸಹನೆ ಮತ್ತು ಶಾಂತಿಯನ್ನೇ ತೋರಿಸಿದೆ. ಆದರೆ ಭದ್ರತೆ, ಶುದ್ಧ ಇಂಧನ ಉತ್ಪಾದನೆ, ಜನಸಂಖ್ಯಾ ಒತ್ತಡ, ಹವಾಮಾನ ಬದಲಾವಣೆ ಮುಂತಾದ ವಿಷಯಗಳ ನಡುವೆ ಈಗ ನಿರ್ಧಯಯಕವಾಗಿ ನಡೆದುಕೊಳ್ಳಬೇಕಾಗಿದೆ.
2012ರಲ್ಲಿ ಭಯೋತ್ಪಾದಕರು ತುಲ್ಬುಲ್ ಯೋಜನೆ ಮೇಲೆ ದಾಳಿ ಮಾಡಿದ ಘಟನೆಯು, ಪಾಕ್ನ ಉದ್ದೇಶಗಳನ್ನು ಸ್ಪಷ್ಟಪಡಿಸುತ್ತದೆ. ಕಳೆದ ಎರಡು ವರ್ಷಗಳಲ್ಲಿ ಭಾರತ ಒಪ್ಪಂದದ ಪರಿಷ್ಕಾರಗಳ ಬಗ್ಗೆ ಚರ್ಚಿಸಲು ಪಾಕ್ಗೆ ಆಹ್ವಾನ ನೀಡಿದರೂ, ಅದು ನಿರಾಕರಿಸಿದೆ.
ಹೀಗಾಗಿ, ಪಾಕಿಸ್ತಾನ ತನ್ನ ಭಯೋತ್ಪಾದಕ ಚಟುವಟಿಕೆಗಳನ್ನು ನಿಲ್ಲಿಸುವವರೆಗೆ, ಭಾರತ ತನ್ನ ನಿರ್ಧಾರದಲ್ಲಿ ಬದಲಾವಣೆ ಮಾಡದು ಎಂದು ವಿಶ್ವಸಂಸ್ಥೆಯಲ್ಲಿ ಸ್ಪಷ್ಟಪಡಿಸಲಾಗಿದೆ.