
Bengaluru: ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಸುಮಾರು 14 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಲಾಗಿದೆ ಎಂಬ ಆರೋಪ ಸಂಬಂಧವಾಗಿ ರಾಜ್ಯ ಸರ್ಕಾರ SIT (ವಿಶೇಷ ತನಿಖಾ ತಂಡ) ರಚಿಸಿದ್ದು, ಇದನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಹೈಕೋರ್ಟ್ ಮೊರೆ ಹೋಗಿದ್ದಾರೆ.
2025ರ ಜನವರಿ 28ರಂದು ಸರ್ಕಾರ SIT ರಚನೆ ಮಾಡಿ ಆದೇಶ ನೀಡಿತ್ತು. ಆದರೆ, ಇದನ್ನು ಪ್ರಶ್ನಿಸಿರುವ ಕುಮಾರಸ್ವಾಮಿ, ಈ ಎಸ್ಐಟಿ ರಚನೆಗೆ ಯಾವುದೇ ಗೆಜೆಟ್ ಅಧಿಸೂಚನೆ ನೀಡಲಾಗಿಲ್ಲ ಎಂದು ಹೇಳಿದ್ದಾರೆ. ಆದೇಶ ಮಾತ್ರವಿದ್ದು, ಅದು ಕಾನೂನುಬಾಹಿರವಾಗಿದ್ದು, ರದ್ದುಗೊಳಿಸಬೇಕು ಎಂದು ಅವರು ಹೈಕೋರ್ಟಿಗೆ ಅರ್ಜಿ ನೀಡಿದ್ದಾರೆ.
ಮೇ 29ರಂದು ತಹಶೀಲ್ದಾರ್ ನೀಡಿದ್ದ ಸಮನ್ಸ್ನ್ನು ರದ್ದುಪಡಿಸಲು ಸಹ ಕುಮಾರಸ್ವಾಮಿ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ. ಸರ್ಕಾರದ ಆದೇಶ ಹಾಗೂ ನಂತರ ತಹಶೀಲ್ದಾರ್ ತೆಗೆದುಕೊಂಡ ಕ್ರಮಗಳು ಎಲ್ಲಾ ಕಾನೂನುಬಾಹಿರವಾಗಿವೆ ಎಂದು ಅವರು ಹೇಳಿದ್ದಾರೆ.
ಈ ಎಸ್ಐಟಿಗೆ ಪ್ರಾದೇಶಿಕ ಆಯುಕ್ತ ಅಮಲಾನ್ ಆದಿತ್ಯ ಬಿಸ್ವಾಸ್ ನೇತೃತ್ವ ವಹಿಸಿದ್ದಾರೆ. ಜೊತೆಗೆ ವಿವಿಧ ಕಂದಾಯ ಇಲಾಖೆ ಅಧಿಕಾರಿಗಳು ಸದಸ್ಯರಾಗಿ ಸೇರಿದ್ದಾರೆ.
ಅರ್ಜಿದಾರರು 1995ರಿಂದ ಈ ಜಮೀನನ್ನು ಖರೀದಿಸಿದ್ದು, ಮಾಲೀಕರಾಗಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದಾರೆ. ತಹಶೀಲ್ದಾರ್ ಮರು ಸರ್ವೆ ಬಗ್ಗೆ ನೀಡಿದ ಸೂಚನೆಗೂ ಸರಿಯಾದ ಅಧಿಸೂಚನೆ ಇಲ್ಲ ಎಂದಿದ್ದಾರೆ.
ಈ ಜಮೀನಿನಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಕರು ಸೇರಿ ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಇದೆ. ಈ ಕುರಿತಂತೆ ಲೋಕಾಯುಕ್ತ ವರದಿಯ ಮೇರೆಗೆ ಹೈಕೋರ್ಟ್ ಸರ್ಕಾರಕ್ಕೆ ಕ್ರಮಕೈಗೊಳ್ಳುವಂತೆ ಆದೇಶಿಸಿತ್ತು. ಆದರೆ, ಅದು ಜಾರಿಗೆ ಬರಲಿಲ್ಲ ಎಂದು ಹಿರೇಮಠ ಎಂಬವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.