
Ankatatti, Sidlaghatta : ಸಮಾಜವಾದಿ ಸಿದ್ಧಾಂತಗಳು, ಹೋರಾಟದ ಮನೋಭಾವ, ನೈತಿಕತೆ ಮುಂತಾದ ವಿಚಾರಗಳನ್ನು ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಬಹಳಷ್ಟು ನಮಗೆ ಕಲಿಸಿದ್ದಾರೆ. ಅವರಿಂದ ನನ್ನ ವ್ಯಕ್ತಿತ್ವ ರೂಪುಗೊಂಡಿತು ಎಂದು ಎಚ್.ಎಂ.ಕೆ.ಪಿ (ಹಿಂದ್ ಮಜ್ದೂರ್ ಕಿಸಾನ್ ಪಂಚಾಯತ್) ರಾಷ್ಟ್ರೀಯ ಅಧ್ಯಕ್ಷ ಭಕ್ತರಹಳ್ಳಿ ಎಲ್.ಕಾಳಪ್ಪ ತಿಳಿಸಿದರು.
ತಾಲ್ಲೂಕಿನ ಅಂಕತಟ್ಟಿ ಗೇಟ್ ಬಳಿಯ ಎಸ್.ಎನ್.ಫಾರ್ಮ್ ನಲ್ಲಿರುವ ಕೃಂಬಿಗಲ್ ಕುಟೀರದಲ್ಲಿ ಸೋಮವಾರ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ವಿಜಯಪುರ ಲೀಜನ್ ಹಾಗೂ ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ಅವರ 95 ನೇ ಜನ್ಮದಿನದ ಸವಿನೆನಪಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1974 ರ ರೈಲ್ವೆ ಪ್ರತಿಭಟನೆಯನ್ನು ಜಾರ್ಜ್ ಫರ್ನಾಂಡಿಸ್ ನೇತೃತ್ವ ವಹಿಸಿದ್ದರು. ನಾನಾಗ 20 ವರ್ಷದ ಯುವಕ. ಆ ಹೋರಾಟ ನಮಗೆಲ್ಲಾ ಸ್ಫೂರ್ತಿ. ನಂತರ, 1975 ಜೂನ್ 25 ಕ್ಕೆ ಇಂದಿರಾಗಾಂಧಿ ಎಮರ್ಜೆನ್ಸಿ ಘೋಷಿಸಿದರು. ರಾಜಕೀಯ ನಾಯಕರ ಬಂಧನವಾಯಿತು, ಪತ್ರಿಕಾ ಸ್ವಾತಂತ್ರ್ಯವನ್ನು ಸಹ ಹತ್ತಿಕ್ಕಲಾಯಿತು. ಆ ಸಂದರ್ಭದಲ್ಲಿ ಯೂನಿಯನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಾವು ಪೊಲೀಸರ ಹಾಗೂ ಮೀಸಾ ಕಾಯ್ದೆಯ ಭಯದಿಂದ ಸಂಧಾನ ಮಾಡಿಕೊಂಡೆವು. ಆದರೆ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಘಟನೆಗಳನ್ನೆಲ್ಲಾ ನಾನು ಗಮನಿಸುತ್ತಿದ್ದೆ. ಆಗ ಜಾರ್ಜ್ ಫರ್ನಾಂಡಿಸ್ ಭೂಗತವಾಗಿಬಿಟ್ಟರು. ಅವರ ತಮ್ಮ ಲಾರೆನ್ಸ್ ಫರ್ನಾಂಡಿಸ್ ಅವರನ್ನು ಹಿಂಸಿಸಿದರು. 1976 ರಲ್ಲಿ ಜಾರ್ಜ್ ಅವರನ್ನು ಬಂಧಿಸಿದರು. ಅವರನ್ನು ಸಹ ಸಾಕಷ್ಟು ಹಿಂಸಿಸಿದರು. 1977 ರಲ್ಲಿ ಎಮರ್ಜೆನ್ಸಿ ಹಿಂಪಡೆದರೂ ಜಾರ್ಜ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಿಲ್ಲ. ಜೈಲಿನಿಂದಲೇ ಅವರು ಚುನಾವಣೆಗೆ ನಿಂತು ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದರು. ಜನತಾ ಪಕ್ಷದ ಸರ್ಕಾರದಲ್ಲಿ ಸಚಿವರೂ ಆದರು. ಅವರು ಚುನಾವಣಾ ಪ್ರಚಾರಕ್ಕೆ ಅವರ ತಾಯಿ ಹೋಗಿದ್ದರು. ನಾವು ಅವರ ತಮ್ಮ ಮೈಕೆಲ್ ಜೊತೆ ಇರುತ್ತಿದ್ದೆವು.
ರೈಲ್ವೆ ಹೋರಾಟದಲ್ಲಿ ಭಾಗಿಯಾಗಿದ್ದ 60 ಸಾವಿರ ಜನರನ್ನು ಇಂದಿರಾಗಾಂಧಿ ಕೆಲಸದಿಂದ ತೆಗೆದು ಹಾಕಿದ್ದರು. ಅವರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವ ವಿಚಾರದಲ್ಲಿ ಆಗಿನ ಪ್ರಧಾನಿ ಮೊರಾರ್ಜಿ ಅವರಿಗೆ ಜಾರ್ಜ್ ಒತ್ತಾಯಿಸುತ್ತಿದ್ದರು. ಬೆಂಗಳೂರಿಗೆ ಬಂದಾಗ, ನಮ್ಮೊಂದಿಗೆ ಈ ವಿಷಯವನ್ನೆಲ್ಲಾ ಹಂಚಿಕೊಳ್ಳುತ್ತಿದ್ದರು. ರಾಜೀನಾಮೆ ಕೊಡುತ್ತೇನೆ ಎಂದು ಸಹ ಹೇಳುತ್ತಿದ್ದರು. ಆಗ ಮೈಕೆಲ್ ಮತ್ತು ಲಾರೆನ್ಸ್, ಬೇಡ ಸರ್ಕಾರದ ಒಳಗಿದ್ದೇ ಹೋರಾಡು ಎನ್ನುತ್ತಿದ್ದರು. ಪಾರ್ಲಿಮೆಂಟಿನಲ್ಲಿ ಪ್ರಧಾನಿ ಮೊರಾರ್ಜಿ ಅವರನ್ನು ಮತ್ತು ರೈಲ್ವೆ ಸಚಿವರನ್ನು ಸಹ ಕೇಳದೆ ಕೈಗಾರಿಕಾ ಸಚಿವರಾಗಿದ್ದ ಇವರು 60 ಸಾವಿರ ಜನರನ್ನು ಪುನಃ ಸೇರಿಸಿಕೊಳ್ಳಲಾಗಿದೆ ಎಂದು ಸರ್ಕಾರದ ಪರವಾಗಿ ಘೋಷಿಸಿದ್ದ ಧೀಮಂತ ನಾಯಕ ಜಾರ್ಜ್. ಅಷ್ಟೊಂದು ಧೈರ್ಯ ಇನ್ನಾವ ನಾಯಕನಿಗೂ ಇದ್ದಿರಲಾರದು ಎಂಬುದು ನನ್ನ ಭಾವನೆ.
ನಂತರ 1983 ರಲ್ಲಿ ಬೆಂಗಳೂರಿನಲ್ಲಿ ಎಚ್.ಎಂ.ಕೆ.ಪಿ (ಹಿಂದ್ ಮಜ್ದೂರ್ ಕಿಸಾನ್ ಪಂಚಾಯತ್) ಸಂಸ್ಥಾಪನಾ ಸಮ್ಮೇಳನವನ್ನು ಆಯೋಜಿಸಲು ಜಾರ್ಜ್ ಅವರು ನನಗೆ ಜವಾಬ್ದಾರಿ ವಹಿಸಿದರು. ಅಂದಿನಿಂದ ಅವರೊಂದಿಗೆ ಒಡನಾಟ ಹೆಚ್ಚಿತು. ಅವರಿಂದ ನನ್ನ ವ್ಯಕ್ತಿತ್ವ ರೂಪುಗೊಂಡಿತು.
1997 ರಲ್ಲಿ ಅವರು ನನ್ನನ್ನು ಇಸ್ರೇಲ್ ದೇಶಕ್ಕೆ ಕಳುಹಿಸಿಕೊಟ್ಟರು. ಅಲ್ಲಿ “ರೋಲ್ ಆಫ್ ಲೇಬರ್ ಮೂವ್ಮೆಂಟ್ ಇನ್ ದಿ ನ್ಯಾಷನಲ್ ಡೆವಲೆಪ್ಮೆಂಟ್” ಎಂಬ ಮೂರು ತಿಂಗಳ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಈ ಅಂತಾರಾಷ್ಟೀಯ ಮಟ್ಟದ ಕಾರ್ಯಾಗಾರದಲ್ಲಿ ಭಾರತವನ್ನು ನಾನು ಮತ್ತು ಮಹಾರಾಷ್ಟ್ರದಿಂದ ಬಂದಿದ್ದವರೊಬ್ಬರು ಮಾತ್ರ ಪ್ರತಿನಿಧಿಸಿದ್ದೆವು. ಅಂದಿನಿಂದಲೂ ಅವರ ಒಡನಾಟ ನಿರಂತರವಾಗಿತ್ತು ಎಂದು ವಿವರಿಸಿದರು.
ಜಾರ್ಜ್ ಫರ್ನಾಂಡೀಸ್ ಪ್ರಸಿದ್ಧ ಕಾರ್ಮಿಕ ಹೋರಾಟಗಾರ, ಮಾನವ ಹಕ್ಕುಗಳ ಹೋರಾಟಗಾರ, ಪತ್ರಕರ್ತ, ಸಮಾಜವಾದಿ, ರಾಜಕಾರಣಿ, ಕ್ರಿಯಾಶೀಲ ವ್ಯಕ್ತಿ. ಅವರು ಜನಪ್ರತಿನಿಧಿಯಾಗಿ ಲೋಕಕ್ಕಾಗಿ ಸವೆಸಿದ ಪ್ರಾಮಾಣಿಕ ಬದುಕು ಅನನ್ಯವಾದದ್ದು ಎಂದರು.
ಬಿ.ಎಂ.ವಿ ಶಿಕ್ಷಣ ಸಂಸ್ಥೆಯ ಟ್ರಸ್ಟೀ ಸಂತೆ ನಾರಾಯಣಸ್ವಾಮಿ, ಚಿದಾನಂದ, ಚಂದ್ರಶೇಖರ ಹಡಪದ್, ಜಯರಾಂ, ಶಿವಕುಮಾರ್ ಹಾಜರಿದ್ದರು.