
ಹೊಳೆನರಸೀಪುರ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ (Stampede case) ಸಂಬಂಧಿಸಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, (Minister Satish Jarkiholi) “ಇಂತಹ ದೊಡ್ಡ ಕಾರ್ಯಕ್ರಮಕ್ಕೆ ಅನುಮತಿ ಯಾರು ನೀಡಿದರು ಎಂಬುದು ಸ್ಪಷ್ಟವಾಗಬೇಕು. ಪೊಲೀಸ್ ಕಮಿಷನರ್ ಅಥವಾ ಅವರ ಅಧಿಕಾರಿಗಳು ಈ ಕುರಿತು ಸರ್ಕಾರಕ್ಕೆ ಪೂರ್ವ ಮಾಹಿತಿ ನೀಡಬೇಕಾಗಿತ್ತು. ಹೀಗಾಗಿ ಈ ಘಟನೆಯಲ್ಲಿ ಪೊಲೀಸರ ತಪ್ಪು ಕಂಡುಬರುತ್ತದೆ” ಎಂದು ಹೇಳಿದ್ದಾರೆ.
“ಸ್ಟೇಡಿಯಂಗೆ ಹೋಗುವ ಮೊದಲು ಜನಸಂಖ್ಯೆಯ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಬೇಕಾಗಿತ್ತು. ಕಮಿಷನರ್ ಅಥವಾ ಅವರ ಕೆಳಾಧಿಕಾರಿಗಳು ಏನು ನಿರ್ಧಾರ ತೆಗೆದುಕೊಂಡರು ಎಂಬುದರಲ್ಲಿ ಗೊಂದಲವಿದೆ. ಸಿಐಡಿ ತನಿಖೆ ನಡೆಯಲಿದೆ ಮತ್ತು ವರದಿ ನಂತರ ಸತ್ಯಾಂಶ ತಿಳಿದುಬರಲಿದೆ” ಎಂದು ಅವರು ಹೇಳಿದರು.
ಬೇಲೂರಿಗೆ ಹೆಚ್ಚಿನ ಅನುದಾನ: ಹೊಳೆಬೀದಿಗೆ ಸೇತುವೆ ಕಾಮಗಾರಿ ಆರಂಭ “ಬೇಲೂರಿನ ಪುರಾತನ ದೇವಾಲಯವು ವಿಶ್ವ ಪಾರಂಪರಿಕ ತಾಣವಾಗಿರುವುದರಿಂದ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಹೊಳೆಬೀದಿಗೆ ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಈ ಕಾಮಗಾರಿ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ನಂತರ ತಾಲ್ಲೂಕಿನ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತದೆ” ಎಂದರು.
ಬಸ್ ನಿಲ್ದಾಣ ನಿರ್ಮಾಣಕ್ಕೆ ಸಹಕಾರ: “ಹೊಳೆಬೀದಿಯ ರಸ್ತೆಗಳು ಅಭಿವೃದ್ಧಿಯಾದ ನಂತರ, ಹೊಸ ಬಸ್ ನಿಲ್ದಾಣ ಹಾಗೂ ಮುಖ್ಯರಸ್ತೆ ಅಗಲೀಕರಣಕ್ಕೆ ಸಹಾಯ ಮಾಡಲಾಗುತ್ತದೆ. ಬೇಕಾದರೆ ಬಸ್ ನಿಲ್ದಾಣಕ್ಕಾಗಿ ಲೋಕೋಪಯೋಗಿ ಇಲಾಖೆಯ ಜಾಗವನ್ನು ಬಳಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ. ಜೊತೆಗೆ ಸಾರಿಗೆ ಸಚಿವರೊಂದಿಗೆ ಮಾತುಕತೆ ನಡೆಸಿ ಹೆಚ್ಚುವರಿ ಬಸ್ ನಿಲ್ದಾಣ ಸ್ಥಾಪನೆಗೆ ಸಹ ಚಿಂತನೆ ನಡೆಸುತ್ತೇವೆ” ಎಂದಿದ್ದಾರೆ.
ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿದರು. ಈ ವೇಳೆ ಶಾಸಕರಾದ ಚಂದ್ರಪ್ಪ, ಸಂಸದೆ ಶ್ರೇಯಸ್ ಪಟೇಲ್, ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.