
Mumbai: ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಹಾಗೂ ಶಿವಸೇನೆ (ಯುಬಿಟಿ) ಮೈತ್ರಿಯ ಬಗ್ಗೆ ಊಹಾಪೋಹಗಳು ನಡೆಯುತ್ತಿರುವ ನಡುವೆಯೇ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಎಂಎನ್ಎಸ್ ನಾಯಕ ರಾಜ್ ಠಾಕ್ರೆ (Fadnavis-Raj Thackeray) ಅವರನ್ನು ಬುಧವಾರ ಬಾಂದ್ರಾದ ಹೋಟೆಲಿನಲ್ಲಿ ಭೇಟಿ ಮಾಡಿದ್ದಾರೆ.
ಈ ಭೇಟಿ ರಾಜಕೀಯವಾಗಿ ಮಹತ್ವ ಪಡೆದಿದ್ದು, ಇಬ್ಬರು ನಾಯಕರು ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿದರೆಂದು ಮೂಲಗಳು ತಿಳಿಸಿವೆ. ಬಿಜೆಪಿಯ ಪ್ರಮುಖ ವಕ್ತಾರ ಕೇಶವ್ ಉಪಾಧ್ಯೆ ಈ ಕುರಿತು ಪ್ರತಿಕ್ರಿಯಿಸಿ, “ಅವರು ಉತ್ತಮ ಸ್ನೇಹಿತರು, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡಿರಬಹುದು” ಎಂದಿದ್ದಾರೆ.
ಇತ್ತ ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿದ್ದು, ಮುಂಬೈ ಸೇರಿ 29 ಮಹಾನಗರ ಪಾಲಿಕೆಗಳಿಗೆ ವಾರ್ಡ್ ಹಂಚಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ ಮತ್ತು ಉದ್ಧವ್ ಠಾಕ್ರೆ ನಡುವೆ ರಾಜಕೀಯ ಸಹಕಾರ ಸಾಧ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇತ್ತೀಚೆಗಿನ ಭಾಷಣಗಳಲ್ಲಿ ಉದ್ಧವ್ ಠಾಕ್ರೆ, “ಮಹಾರಾಷ್ಟ್ರದ ಹಿತಕ್ಕಾಗಿ ಪುನಃ ಒಟ್ಟಾಗುವುದು ಅಸಾಧ್ಯವಲ್ಲ” ಎಂದರು. ರಾಜ್ ಠಾಕ್ರೆ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದರೂ, ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಯಾವುದೇ ಗೆಲುವು ದಾಖಲಿಸಿಲ್ಲ.
ಈ ವರ್ಷದ ಫೆಬ್ರವರಿಯಲ್ಲಿಯೂ ಸಿಎಂ ಫಡ್ನವೀಸ್ ಅವರು ರಾಜ್ ಠಾಕ್ರೆ ಅವರನ್ನು ಭೇಟಿಯಾಗಿದ್ದರು. ಈಗಲೂ ಅವರ ಭೇಟಿಯು ರಾಜಕೀಯವಾಗಿ ಹೊಸ ಸಮೀಕರಣಗಳಿಗೆ ದಾರಿ ಹಾಕುವ ಸಾಧ್ಯತೆ ಇದೆ.
ಮೈತ್ರಿಯ ಚರ್ಚೆಗೆ ಬೆನ್ನುಡಿದಂತೆ, ಕಾಂಗ್ರೆಸ್ ಪಕ್ಷ, “ಬಿಜೆಪಿಯಿಂದ ದೂರವಿದ್ದು, ರಾಜ್ಯದ ಹಿತಾಸಕ್ತಿಗೆ ಅನುಕೂಲಕರ ಮೈತ್ರಿ ನಿರ್ಮಾಣವಾದರೆ ಅದನ್ನು ಸ್ವಾಗತಿಸುತ್ತೇವೆ” ಎಂದು ತಿಳಿಸಿದೆ.